ಕೈಕಂಬ:ಪೊಳಲಿ ರಾಜರಾಜೇಶ್ವರಿ ದೇವಳಕ್ಕೆ ಸಮೀಪದ ಮನೆಯೊಂದರ ಬಾವಿಯಲ್ಲಿ ಬಿಸಿನೀರಿನ ಬುಗ್ಗೆ ಕಾಣಿಸಿಕೊಂಡು ಬಾವಿಯ ಸಿಹಿನೀರು ಬಿಸಿನೀರಾಗಿ ಪರಿವರ್ತಿತವಾದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಬ್ಯಾಂಡ್ ವಾದಕರಾಗಿರುವ ಮೋಹನ್ ಎಂಬವರ ಮನೆಯ ಬಾವಿಯತ್ತ ಕುತೂಹಲಿಗರ ದಂಡೇ ಆಗಮಿಸುತ್ತಿದ್ದು, ಅಕ್ಕಪಕ್ಕದ ಗ್ರಾಮಗಳ ಜನರು ಇದೊಂದು ಪವಾಡವೆಂದು ಹೇಳುತ್ತಿದ್ದಾರೆ. ಸದ್ಯ ಮನೆಯ ಬಾವಿ ಕುತೂಹಲದ ಕೇಂದ್ರಬಿಂದುವಾಗಿದೆ.
ಘಟನೆಯ ವಿವರ:
ಮೋಹನ್ ಎಂಬವರ ಮನೆಯ ಅಂಗಳದಲ್ಲಿ ವರ್ಷಪೂರ್ತಿ ನೀರು ದೊರೆಯುವ ಸಿಹಿನೀರಿನ ಬಾವಿಯಿದ್ದು, ಇಂದು ಮುಂಜಾನೆ ಮನೆಯ ನಿತ್ಯ ಕೆಲಸಗಳಿಗಾಗಿ ಬಾವಿಯ ನೀರು ಸೇದಿದಾಗ ಅಚ್ಚರಿ ಎದುರಾಗಿದೆ. ಬಾವಿಯ ನೀರು ತಣ್ಣಗಿರದೆ ಬಿಸಿಯಾಗಿತ್ತು. ಬಳಿಕ ಮನೆಮಂದಿ ಎಲ್ಲರೂ ಅಚ್ಚರಿಗೊಂಡು ಮತ್ತೆ ಮತ್ತೆ ಬಾವಿಯಿಂದ ನೀರು ಸೇದಿ ಮೇಲಕ್ಕೆ ತೆಗೆದಿದ್ದು ಈ ವೇಳೆ ಬಾವಿಯ ನೀರು ಬಿಸಿಯಾಗಿದ್ದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದ್ದು ಅಕ್ಕಪಕ್ಕದ ಮನೆಯವರು ಆಗಮಿಸಿ ಪರೀಕ್ಷೆ ನಡೆಸಿದ್ದು ಈ ವೇಳೆಯೂ ಬಾವಿಯ ನೀರು ಬಿಸಿಯಾಗಿರುವುದು ಬೆಳಕಿಗೆ ಬಂದಿದೆ.
ಕೆಲವೇ ತಾಸಿನಲ್ಲಿ ವಿಷಯ ತಿಳಿದ ತೇವುಗುಡ್ಡೆ, ಪೊಳಲಿ, ಕರಿಯಂಗಳ, ಕೈಕಂಬ, ಕಾಜಿಲ, ಅಡ್ಡೂರು, ಬಡಕಬೈಲು ಕಡೆಯಿಂದ ಜನರ ದಂಡು ಬಾವಿಯತ್ತ ಆಗಮಿಸಿದ್ದು ಸ್ಥಳದಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಎಲ್ಲರೂ ಬಾವಿಯ ನೀರು ಸೇದಿ ಮೇಲಕ್ಕೆತ್ತುತ್ತಿದ್ದು ಬಾವಿಯ ನೀರು ವಿಪರೀತ ಬಿಸಿಯಾಗಿತ್ತು ಎಂದು ತಿಳಿದುಬಂದಿದೆ. ಬಾವಿಯಲ್ಲಿ ಜಲಚರಗಳು ಇದ್ದು, ನೀರು ಏಕಾಏಕಿ ಬಿಸಿಯೇರಿದ್ದರಿಂದ ಅವುಗಳ ಪ್ರಾಣಕ್ಕೂ ಕಂಟಕ ಎದುರಾಗಿದೆ. ಕೆಲವು ಜಲಚರಗಳು ಪ್ರಾಣ ಉಳಿಸಿಕೊಳ್ಳಲು ಬಾವಿಯ ಗೋಡೆಯನ್ನು ಹತ್ತಿ ಮೇಲಕ್ಕೆ ಬರುತ್ತಿವೆ. ಮನೆಮಂದಿ ಇದು ಅಚ್ಚರಿಯೋ, ಪವಾಡವೋ ಎಂದು ಅರಿಯದೆ ಕಂಗಾಲಾಗಿದ್ದಾರೆ.
ಘಟನೆ ನಡೆದ ಮನೆ ಪೊಳಲಿ ದೇವಸ್ಥಾನಕ್ಕೆ ಸಮೀಪದಲ್ಲೇ ಇರುವ ಕಾರಣ ಜನರು ಇದನ್ನು ‘ದೇವರ ಕಾರಣಿಕ’ ಎಂದೇ ಹೇಳುತ್ತಿದ್ದಾರೆ. ಮಹಿಳೆಯರು, ಮಕ್ಕಳೆನ್ನದೆ ಜನರು ಮನೆಯತ್ತ ಆಗಮಿಸುತ್ತಿರುವ ಕಾರಣ ಸ್ಥಳದಲ್ಲಿ ಜನರನ್ನು ನಿಯಂತ್ರಿಸುವುದೂ ಮನೆಮಂದಿಗೆ ಕಷ್ಟವಾಗಿದೆ. ಪೊಳಲಿ ದೇವಳಕ್ಕೆ ಭೇಟಿಕೊಡುವ ಭಕ್ತರೂ ವಿಷಯ ತಿಳಿದು ಮನೆಗೆ ಬಂದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭೂಮಿಯ ತಳದಲ್ಲಿ ಘಟಿಸುವ ಕೆಲವೊಂದು ವೈಜ್ಞಾನಿಕ ವೈಪರೀತ್ಯದಿಂದಾಗಿ ಬಿಸಿನೀರಿನ ಬುಗ್ಗೆಗಳು ಏಳುತ್ತವಾದರೂ ಪೊಳಲಿಯ ಘಟನೆಯ ಬಗ್ಗೆ ಭೂವಿಜ್ಞಾನಿಗಳು ಇನ್ನಷ್ಟೇ ಸ್ಪಷ್ಟನೆಯನ್ನು ನೀಡಬೇಕಿದೆ.







