ಮೂಡುಬಿದಿರೆ: ಪುಣ್ಯ ಕ್ಷೇತ್ರಗಳಿಂದ ಹೊರಡುವ ಯಕ್ಷಗಾನ ಮೇಳಗಳ ಯಕ್ಷಗಾನ ನಡೆಯುವ ಸ್ಥಳಗಳು ದೇವಸ್ಥಾನವಿದಂತೆ. ಯಕ್ಷಗಾನದ ಚೌಕಿ ದೇವರ ಗರ್ಭಗುಡಿ ಎಂಬ ಭಾವನೆ ಇಂದಿಗೂ ಕಲಾ ಆರಾಧಕರಲ್ಲಿದೆ. ಸತ್ಯ ಧರ್ಮದ ತಳಹದಿಯಿಂದ ಯಕ್ಷಗಾನದ ಆರಾಧನೆ ಮಾಡಿದರೆ ಸುಖ ಸಂಪತ್ತು ಸಿಗುತ್ತದೆ ನಂಬಿಕೆ ನಮ್ಮದು. ಸಮಾಜ, ಸಂಸ್ಕಾರವನ್ನು ಬೆಳಗಿಸುವ ಆರಾಧನಾ ಕಲೆಯಾದ ಯಕ್ಷಗಾನವು ಧರ್ಮ ಜಾಗೃತಿ ಮಾಡುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಮಂಗಳೂರು ಹೇಳಿದರು. ಬೆಳುವಾಯಿ ಯಕ್ಷದೇವ ಮಿತ್ರ ಕಲಾಮಂಡಳಿಯ ಆಶ್ರಯದಲ್ಲಿ ಕಟೀಲು 6 ಮೇಳಗಳ ಕಲಾವಿದರಿಂದ ಮಳೆಗಾಲದ ಮಹೋನ್ನತ ಯಕ್ಷಮಹೋತ್ಸವ ಹಾಗೂ 19ನೇ ವರ್ಷದ ಯಕ್ಷಾಂಬಾರಾಧನಮ್ ಯಕ್ಷಗಾನ ವೈವಿಧ್ಯ ಕಾರ್ಯಕ್ರಮಗಳನ್ನು ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಉದ್ಘಾಟಿಸಿ, ಮಾತನಾಡಿದರು.

ಶ್ರೀ ಕಟೀಲು ಮೇಳಗಳ ಯಜಮಾನ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಯಕ್ಷಾಂಬಾರಾಧನಮ್ ಅನ್ನು ಉದ್ಘಾಟಿಸಿದರು.
ಕಟೀಲಿನ ಅರ್ಚಕ ವೇ.ಮೂ ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿ, ಜೈನಕಾಶಿ ಮೂಡುಬಿದಿರೆಯಲ್ಲಿ ಯಕ್ಷಗಾನವನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯಕ್ಷದೇವ ಮಿತ್ರ ಕಲಾಮಂಡಳಿಯಂತಹ ಸಂಘ, ಸಂಸ್ಥೆಗಳಿಂದ ಯಕ್ಷಕಾಶಿಯಾಗಿ ಮೂಡುಬಿದಿರೆ ಬೆಳಗಲಿ ಎಂದು ಶುಭ ಹಾರೈಸಿದರು.
ಯಕ್ಷ ಗುರು ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು.
ದಿ.ಮಿಜಾರು ಅಣ್ಣಪ್ಪ ಹಾಸ್ಯಗಾರ ಸಂಸ್ಮರಣೆ ಭಾಷಣವನ್ನು ಕಲಾ ವಿಮರ್ಶಕ ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ ಮಾಡಿದರು.
ಕಾರ್ಕಳ ಸಾಹಿತ್ಯ ಸಂಘದ ಸಂಚಾಲಕ ಎಂ.ರಾಮಚಂದ್ರ ಸಮಾರಂಭ ಅಧ್ಯಕ್ಷತೆ ವಹಿಸಿದರು. ದಿ. ಮಿಜಾರು ಅಣ್ಣಪ್ಪನವರ ಸುಪುತ್ರ ಸದಾಶಿವ ಮಿಜಾರು, ತೋಡಾರು-ಮಿಜಾರು ಲಯನ್ಸ್ ಕ್ಲಬ್ ಅಧ್ಯಕ್ಷ ಮರಿಯಡ್ಕ ರಮೇಶ್ ಶೆಟ್ಟಿ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಎಕ್ಸಲೆಂಟ್ ಪಿಯು ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಯಕ್ಷದೇವ ಮಿತ್ರ ಕಲಾಮಂಡಳಿಯ ಗೌರವಾಧ್ಯಕ್ಷ ಶ್ರೀಪತಿ ಭಟ್ ವೇದಿಕೆಯಲ್ಲಿದ್ದರು.
ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರನ್ನು ಗೌರವಿಸಲಾಯಿತು.
ಕಲಾಮಂಡಳಿಯ ಕಾರ್ಯಾಧ್ಯಕ್ಷ ಎಂ ದೇವಾನಂದ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರವಿ ಪ್ರಸಾದ್ ಕೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟರಮಣ ಕೆರೆಗದ್ದೆ ವಂದಿಸಿದರು.
ಮೊದಲು ಕಾರ್ಕಳದ ಅನಂತಶಯನ ಮಹಿಳಾ ಯಕ್ಷಗಾನ ಮಂಡಳಿಯಿಂದ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ಬಳಿಕ ಕಟೀಲು 1ನೇ ಮೇಳದಿಂದ ವಧು-ವೈಶಾಲಿನಿ ಯಕ್ಷಗಾನ ನಡೆಯಿತು.
—
ಯಕ್ಷಾಂಬಾರಾಧನಮ್ನಲ್ಲಿ ಇಂದು:
ಯಕ್ಷಾಂಬಾರಾಧನಮ್ 2ನೇ ದಿನವಾದ ಜುಲೈ 27ರಂದು ಅರ್ಚಕ ಅಲಂಗಾರು ದಿ. ಸೀತಾರಾಮ ಭಟ್(ಕಾಳು ಭಟ್) ಸಂಸ್ಮರಣೆ, ಕಟೀಲು ಮೇಳದ ರಂಗ ಸಹಾಯಕ ವಿಠಲ ಶೆಟ್ಟಿ ಬೆಳ್ತಂಗಡಿ ಅವರಿಗೆ ಸನ್ಮಾನ, ಕಟೀಲು 2ನೇ ಮೇಳದವರಿಂದ ಶ್ರೀರಾಮಾಶ್ವಮೇಧ ಪ್ರಸಂಗ ಪ್ರದರ್ಶನವಿದೆ.
