ಬಂಟ್ವಾಳ: ಕಲೆಯನ್ನು ಪ್ರೀತಿಸುವ ಗುಣ ನಮ್ಮಲ್ಲಿದ್ದಾಗ ಪ್ರತಿಯೊಬ್ಬರೂ ಸಾಧಕರಾಗಬಹುದು. ಪ್ರತಿಯೊಬ್ಬ ವ್ಯಕ್ತಿಯೊಳಗೂ ಒಂದಲ್ಲ ಒಂದು ಕಲೆ ಅಂತರ್ಗತವಾಗಿದ್ದು ಸತತ ಪರಿಶ್ರಮದಿಂದ ಅದನ್ನು ಅಭಿವ್ಯಕ್ತಿಗೊಳಿಸಿದಾಗ ನಾವು ಕೂಡ ಸಾಂಸ್ಕೃತಿಕ ರಾಯಭಾರಿಗಳಾಗಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಅನಂತಪದ್ಮನಾಭ ರಾವ್ ಹೇಳಿದರು.

ಸೇವಾಂಜಲಿ ಪ್ರತಿಷ್ಠಾನನ ಫರಂಗಿಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಸೇವಾಂಜಲಿ ಕಲಾಕೇಂದ್ರದ ಸಂಗೀತ ತರಗತಿಯ ವಾರ್ಷಿಕ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದ ಸದಾಶಿವ ಡಿ. ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಗೀತ ವಿದ್ವಾನ್ ಕೃಷ್ಣ ಆಚಾರ್ ನರಿಕೊಂಬು, ಸೇವಾಂಜಲಿ ಟ್ರಸ್ಟಿಗಳಾದ ಜಯರಾಜ್ ಕರ್ಕೇರಾ, ದೇವದಾಸ ಶೆಟ್ಟಿ ಕೊಡ್ಮಾನ್ ವೇದಿಕೆಯಲ್ಲಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ, ವಂದಿಸಿದರು. ಕಾವ್ಯ ಸುಜೀರು ನಿರೂಪಿಸಿದರು. ಪದ್ಮನಾಭ ಶೆಟ್ಟಿ ಪುಂಚಮೆ ಸಹಕರಿಸಿದರು.
