ಕಲ್ಲಡ್ಕ:ಕಲ್ಲಡ್ಕ ಸಮೀಪದ ಪುರಾಣ ಪ್ರಸಿದ್ಧ ನಿಟಿಲಾಪುರ ಕ್ಷೇತ್ರದಲ್ಲಿ ರೂ 10ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಬಳಿ ಇರುವ ವಿಶಾಲವಾದ ಗದ್ದೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಇದೇ 8ರಂದು ರಾತ್ರಿ ‘ಅಷ್ಟಪವಿತ್ರ ನಾಗಮಂಗಲೋತ್ಸವ’ ಸೇವೆ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಾಗಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.


ಭಾನುವಾರ ಬೆಳಿಗ್ಗೆ ನಿಟಿಲಾಪುರ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಾಗಮಂಡಲದಿಂದ ನಾಡಮಂಗಲ’ ಎಂಬ ಧ್ಯೇಯ ವಾಕ್ಯದಡಿ ನಡೆಯುವ ಈ ಪವಿತ್ರ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 60ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಂದು ಬರುವ ಎಲ್ಲಾ ಭಕ್ತರಿಗೂ ಅನ್ನಪ್ರಸಾದ ನೀಡಲು ಅನುಕೂಲವಾಗುವಂತೆ ಅತ್ಯಾಧುನಿಕ ಅಡುಗೆ ಸಾಮಾಗ್ರಿಗಳನ್ನು ಕೂಡಾ ತರಿಸಲಾಗಿದೆ. ಇನ್ನೊಂದೆಡೆ ವಾಹನ ನಿಲುಗಡೆಗಾಗಿ ಒಟ್ಟು 10 ಎಕ್ರೆ ಜಮೀನು ಸಮತಟ್ಟುಗೊಳಿಸಲಾಗಿದ್ದು, ವಾಹನದಟ್ಟಣೆ ಉಂಟಾಗದಂತೆ ತಡೆಯಲು ಏಕಮುಖ ಸಂಚಾರಕ್ಕೆ ಪ್ರತ್ಯೇಕ ಎರಡು ರಸ್ತೆ ಜೋಡಿಸಲಾಗಿದೆ ಎಂದರು.
ನಾಗಪಾತ್ರಿ ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ಮತ್ತು ಮುದ್ದೂರು ಕೃಷ್ಣಪ್ರಸಾದ ವೈದ್ಯ ಬಳಗದಿಂದ ನಾಗಮಂಡಲೋತ್ಸವ ನಡೆಯುತ್ತಿದ್ದು, ಇದೇ 6ರಂದು ಸಂಜೆ 4ಗಂಟೆಗೆ ಕಲ್ಲಡ್ಕ ಪೇಟೆಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಒಟ್ಟು 14 ಗ್ರಾಮಗಳನ್ನು ಒಳಗೊಂಡ ಮೊಗರ್ನಾಡು ಸಾವಿರ ಸೀಮೆಯಲ್ಲಿ ನಿಟಿಲಾಕ್ಷ ಶ್ರೀ ಸದಾಶಿವ ದೇವರಿಗೆ ಎಲ್ಲಾ ಜಾತಿ, ಧರ್ಮಗಳ ಅಪಾರ ಮಂದಿ ಭಕ್ತರ ಸಮೂಹವೇ ಇದೆ. ಇದರಿಂದಾಗಿ ಈ ಪರಿಸರದಲ್ಲಿ ಇದೇ ಪ್ರಥಮ ಬಾರಿಗೆ ಬೃಹತ್ ಮಟ್ಟದ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ದೇವಳದ ಜೀರ್ಣೋದ್ಧಾರ ಕಾಮಗಾರಿ ಜೊತೆಗೆ ನಾಗಮಂಡಲೋತ್ಸವ ಯಶಸ್ವಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಿತ ಭಕ್ತರು ವಿವಿಧ ತಂಡಗಳನ್ನು ರಚಿಸಿ ಅವಿರತ ಶ್ರಮಿಸುತ್ತಿದ್ದಾರೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ, ವಕೀಲ ಅಶೋಕ್ ಕುಮಾರ್ ಬರಿಮಾರು ಮಾತನಾಡಿ, ಇಲ್ಲಿನ ದೇವರ ಪ್ರೇರಣೆಯಂತೆ ನಡೆಯುವ ನಾಗಮಂಡಲೋತ್ಸವದಿಂದ ಲೋಕ ಕಲ್ಯಾಣ ಜೊತೆಗೆ ಎಲ್ಲಾ ರೀತಿಯ ನಾಗ ಸಂಬಂಧಿದೋಷ ನಿವಾರಣೆಯಾಗುತ್ತದೆ ಎಂದು ಹೇಳಿದರು.
ಇದೀಗ ಇಲ್ಲಿನ ನಾಗಬನದಲ್ಲಿ ಶಿಲಾಮಯ ಗುಡಿ ನಿರ್ಮಾಣಗೊಳ್ಳುತ್ತಿದ್ದು, ನಾಗಮಂಡಲೋತ್ಸವಕ್ಕಾಗಿ ವಿಶಾಲವಾದ ಗದ್ದೆಯಲ್ಲಿ ಎತ್ತರದ ಅತ್ಯಾಕರ್ಷಕ ಮಂಟಪ ನಿಮರ್ಾಣಗೊಳ್ಳುತ್ತಿದೆ ಎಂದರು.
ಸಮಿತಿ ಸಂಚಾಲಕ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ಕೆ.ಪದ್ಮನಾಭ ರೈ ಕಲ್ಲಡ್ಕ, ಆರ್ಥಿಕ ಸಮಿತಿ ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಗಣೇಶ ಶೆಟ್ಟಿ ಗೋಳ್ತಮಜಲು, ಆಡಳಿತಾಧಿಕಾರಿ ಉಮೇಶ ಭಟ್, ಉದ್ಯಮಿ ಅನಂತ ಕಾಮತ್ ಮತ್ತಿತರರು ಇದ್ದರು.

