ಮೂಡುಬಿದರೆ: ಸಂಸ್ಕೃತಿ ಭಿನ್ನ ರೂಪದಲ್ಲಿರಬೇಕು. ಆದರೆ ಸಂಸ್ಕಾರ ಏಕರೂಪದಲ್ಲಿ ಸಾಗುತ್ತಲಿರಬೇಕು. ಆ ಏಕರೂಪತೆಯೇ ನಾವು,ನಮ್ಮ ನಾಡು-ನುಡಿ, ದೇಶ ಎನ್ನುವ ಪ್ರಜ್ಞೆಯನ್ನು ಬೆಳೆಸುತ್ತದೆ. ಶಿಕ್ಷಣ ಮಾಧ್ಯಮದಲ್ಲಿ ಪ್ರವೃತ್ತಿಯ ಮುಖಾಂತರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡುತ್ತಿರುವ ಆಳ್ವಾಸ್ ಸಂಸ್ಥೆ ಸಾಂಸ್ಕೃತಿಕ ಪ್ರಜ್ಞೆಯನ್ನು ಅರಳಿಸುತ್ತದೆ. ಸಂಸ್ಕೃತಿ ಎಂದರೆ ಭಾಷೆ, ಪರಿಸರ, ಪರಿಕರಗಳಿಗೆ ಮಾತ್ರ ಸೀಮಿತವಾಗುವುದಿಲ್ಲ.ಸಂಸ್ಕೃತಿ ಮನುಷ್ಯತ್ವಕ್ಕೆ ಸೀಮಿತವಾಗುತ್ತದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕ ಟಿ.ಎಸ್ ನಾಗಭರಣ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಶನಿವಾರ ನಡೆದ `ಆಳ್ವಾಸ್ ಸಸಾಂಪ್ರದಾಯಿಕ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಿನಿಭಾರತವನ್ನು ಪ್ರತಿನಿಧಿಸುವ ಆಳ್ವಾಸ್ ಸಂಸ್ಥೆಯ ಸಾಂಪ್ರದಾಯಿಕ ದಿನಾಚರಣೆಯಲ್ಲಿ ಕೇವಲ ಉಡುಗೆ ತೊಡುಗೆಗಳು ಕಾಣಸಿಗುವುದಲ್ಲ.ಅದರ ಹಿಂದಿನ ಮನಸ್ಸುಗಳು, ನಮ್ಮೊಳಗೆ ಕನಸ್ಸುಗಳು ಹೇಗೆ ಇರಬಹುದು ಅರಿವಾಗುತ್ತದೆ. ಈ ಮೂಲಕ ಭಾರತವನ್ನು ಹೇಗೆ ಕಟ್ಟಬೇಕು ಎನ್ನುವ ಪ್ರಜ್ಞೆ ನಮ್ಮಲ್ಲಿ ಅಂಕುರಿಸುತ್ತದೆ. ನಾವು ಭಾರತೀಯರು ಸದಾ ಸುಸಂಸ್ಕೃತರು, ಶಾಂತಿಪ್ರಿಯರು. ವಿನಯಶೀಲರು ಎನ್ನುವ ಸಂದೇಶವನ್ನು ಈ ವೇದಿಕೆ ಮುಖಾಂತರ ಜಗಕ್ಕೆ ಸಾರುತ್ತಿದ್ದೇವೆ. ಮನುಷ್ಯ,ಮನಸ್ಸುಗಳನ್ನು ವ್ಯಾಪಾರ ಮಾಡುತ್ತಿರುವ ಇಂದಿನ ಮಾರುಕಟ್ಟೆಯಲ್ಲಿ ಸಾಂಸ್ಕೃತಿಕ ಸೇವೆಯ ಮೂಲಕ ಮನಸ್ಸುಗಳನ್ನು ಕಟ್ಟಬಹುದು. ವಿದ್ಯಾರ್ಥಿ ಕೇಂದ್ರಿತ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುರುಪರಂಪರೆಯ ಮುಖ್ಯವಾಗುತ್ತದೆ. ಗುರುಗಳ ಜೊತೆಗೆ ಗುರಿಯನ್ನು ಸಾಧಿಸಲು ಹೊರಟ್ಟಿರುವುದು ಆಳ್ವಾಸ್ ಸಂಸ್ಥೆಯ ಹೆಚ್ಚುಗಾರಿಕೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿ, ಕಾರ್ಯಕ್ರಮದ ರೂವಾರಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಆಯುರ್ವೆದ ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಯತಿಕುಮಾರ ಸ್ವಾಮಿ ಗೌಡ, ಆಳ್ವಾಸ್ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಶೈಲಾ ಡಿ’ಸೋಜ, ಆಳ್ವಾಸ್ ಬಿಎನ್ವೈಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಆಳ್ವಾಸ್ ಎಂಎಲ್ಟಿ ಕಾಲೇಜಿನ ಪ್ರಾಂಶುಪಾಲ ಡಾ.ವರ್ನನ್ ಡಿ ಸಿಲ್ವ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ ಹಿಟಗಿ, ಆಳ್ವಾಸ್ ಫಿಸಿಯೋಥೆರಫಿ ಕಾಲೇಜಿನ ಪ್ರಾಂಶುಪಾಲ ಡಾ.ಜೋಸೆಫ್ ಒಲಿಯರ್ ವೇದಿಕೆಯಲ್ಲಿದ್ದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

