ಪುತ್ತೂರು ಜಾತ್ರೆ- ರಾಘವೇಶ್ವರ ಶ್ರೀ ಪ್ರಕರಣ: ಸತ್ಯಕ್ಕೆ ಸಂದ ಜಯ: ವಜ್ರದೇಹಿ ಶ್ರೀ
ಬಂಟ್ವಾಳ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆ ಮತ್ತು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ಅನಗತ್ಯ ವಿವಾದ ಸೃಷ್ಟಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದೇವರು ನ್ಯಾಯಾಲಯ ಮೂಲಕ ಸತ್ಯಕ್ಕೆ ಜಯ ತಂದು ಕೊಟ್ಟಿದ್ದಾರೆ. ಆ ಮೂಲಕ ಹಿಂದೂ ವಿರೋಧಿ ಮತ್ತು ಮೂಢನಂಬಿಕೆ ನೆಪದಲ್ಲಿ ಮೂಲ ನಂಬಿಕೆಗೆ ಧಕ್ಕೆ ತರುವ ವಿಘ್ನ ಸಂತೋಷಿಗಳಿಗೆ ತಕ್ಕ ಪಾಠವಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವಾರ್ಷಿಕ ಮಹೋತ್ಸವ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಕರಾವಳಿ ಭಾಗದಲ್ಲಿ ಪ್ರಕೃತಿ ಆರಾಧಿಸುವ ಮೂಲಕ ಸಾಂಸ್ಕøತಿಕ ಮತ್ತು ಧಾರ್ಮಿಕ ಸಂಘಟನೆ ಜೊತೆಗೆ ಗುರು ಹಿರಿಯರಿಗೆ ವಿಶೇಷ ಗೌರವ ನೀಡುತ್ತಿರುವ ಕುಡುಬಿ ಸಮುದಾಯವು ಇತರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮೂಲಕ ವಾರ್ಷಿಕ ರೂ 198ಕೋಟಿಗೂ ಮಿಕ್ಕಿ ಆದಾಯ ಸಂಗ್ರಹಿಸುವ ಸರ್ಕಾರದಿಂದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಮಾತ್ರ ಅನುದಾನ ಸಿಗುತ್ತಿಲ್ಲ ಎಂದು ಟೀಕಿಸಿದರು.
ಎಡಪದವು ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ಗೌಡ ಮುಚ್ಚೂರು ಮಾತನಾಡಿ, ರಾಜಕೀಯ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದ ಕುಡುಬಿ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರ್ಪಡೆಗೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಸರ್ಕಾರವು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಪಿ.ಅನಂತಾಚಾರ್ಯ, ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಶುಭ ಹಾರೈಸಿದರು.
ಪೂಂಜ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಕುಡುಬಿ ಸಂಘದ ಮಾಜಿ ಜಿಲ್ಲಾಧ್ಯಕ್ಷ ಅಣ್ಣಪ್ಪ ನಾಯ್ಕ್, ನಿವೃತ್ತ ಪೊಲೀಸ್ ಅಧಿಕಾರಿ ಭೋಜ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಉಮೇಶ ಕೆ., ಕೋರ್ಯಾರು ಕ್ಷೇತ್ರದ ಗುರಿಕಾರರಾದ ಗೋಪಾಲ ಗೌಡ, ಓಬಯ್ಯ ಗೌಡ ಮತ್ತಿತರರು ಇದ್ದರು.
ಯಶೋಧರ ಗೌಡ ಕೋರ್ಯಾರು ಸ್ವಾಗತಿಸಿ, ಉಮೇಶ ಗೌಡ ಮಂಚಕಲ್ಲು ವಂದಿಸಿದರು. ರಾಜೇಶ ಗೌಡ ಕಲ್ಪನೆ ಕಾರ್ಯಕ್ರಮ ನಿರೂಪಿಸಿದರು.
