ಬಂಟ್ವಾಳ : ಪ್ರಯಾಣಿಕರನ್ನು ಕಾಡುತ್ತಿರುವ ಬಿ.ಸಿ.ರೋಡಿನ ಟ್ರಾಫೀಕ್ ಜಾಮ್ ಸಮಸ್ಯೆಯ ಪರಿಶೀಲನೆಗೆ ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶುಕ್ರವಾರ ಬೆಳಿಗ್ಗೆ ಬಿ.ಸಿ.ರೋಡಿಗೆ ಭೇಟಿ ನೀಡಿದರು. ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೊಡಿಗೆ ಭೇಟಿ ನೀಡಿದ ದ.ಕ.ಜಿಲ್ಲಾ ಧಿಕಾರಿ ಇಬ್ರಾಹಿಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ರವರು, ಇಲ್ಲಿ ವಾಹನದಟ್ಟಣೆಗೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸಿದರು, ಇದೇ ವೇಳೆ ಬಂಟ್ವಾಳ ಡಿವೈಎಸ್ಪಿ ರಶ್ಮಿ ಪರಡ್ಡಿ, ಪ್ರಭಾರ ವೃತ್ತನಿರೀಕ್ಷಕ ಮಂಜಯ್ಯ, ತಹಶೀಲ್ದಾರ್ ಮಲ್ಲೇಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಗಣೇಶ್ ಮೊದಲಾದವರೊಂದಿಗೆ ಸಮಾಲೋಚನೆ ನಡೆಸಿದರು.
ಜಿಲ್ಲಾಧಿಕಾರಿಯವರು ವಾಹನಪ್ರಯಾಣಿಕರಿಗೆ ಕಾಡುವ ಟ್ರಾಫಿಕ್ ಜಾಮ್ ಸಮಸ್ಯೆಯ ಪರಿಹಾರದ ಬಗ್ಗೆ ಚರ್ಚಿಸಿದರು. ಇದೇ ವೇಳೆ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಒಳಿತು ಎಂಬ ಬಗ್ಗೆ ಬಂಟ್ವಾಳದ ಪೊಲೀಸ್ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿಯವರು ಸಹಮತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ ಮಿಶ್ರಾ, ಹೆದ್ದಾರಿ ಇಲಾಖೆಯ ಹನೀಫ್ ಉಪಸ್ಥಿತರಿದ್ದು, ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನಸಂಚಾರಕ್ಕೆ ಅಗತ್ಯವಿರುವ ಕ್ರಮಗಳನ್ನು ಜರುಗಿಸುವುದಾಗಿ ತಿಳಿಸಿದರು.
ಚರಂಡಿ ಸಮಸ್ಯೆ ಪ್ರಸ್ತಾಪ;
ಇದೇ ವೇಳೆ ಬಿ.ಸಿ.ರೋಡಿನಲ್ಲಿ ಮೇಲ್ಸೇತುವೆ ನಿರ್ಮಾಣದ ದಿನದಿಂದ ಆಗಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಗಣೇಶ್ ಜಿಲ್ಲಾಧಿಕಾರಿಯವರ ಮುಂದೆ ಪ್ರಸ್ತಾಪಿಸಿದರು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ ಮಿಶ್ರಾ ರಲ್ಲಿ ಜಿಲ್ಲಾಧಿಕಾರಿಯವರು ವಿಚಾರಿಸಿದಾಗ, ಮುಂದಿನ ಹದಿನೈದು ದಿನದ ಒಳಗಾಗಿ ತೆರೆದುಕೊಂಡಿರುವ ಚರಂಡಿಯನ್ನು ದುರಸ್ತಿಗೊಳಿಸುವುದು, ಹಾಗೂ ಸರ್ವೀಸ್ ರಸ್ತೆಗಳ ಇಕ್ಕೆಲಗಳಲ್ಲಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸುವುದಾಗಿ ತಿಳಿಸಿದರು. ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಇಬ್ರಾಹಿಂ ರವರು, ವಾಹನ ಸವಾರರು ಹಾಗೂ ಪ್ರಯಾಣಿಕರ ಹಿತದಷ್ಟಿಯಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿ.ಸಿ.ರೋಡಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ. ಬಿ.ಸಿ.ರೋಡು ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಮೇಲ್ಸೇತುವೆ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಆ ಬಳಿಕ ಬಿ.ಸಿ.ರೋಡಿನ ಟ್ರಾಫಿಕ್ ಜಾಮ್ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿ ಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಮಾತನಾಡಿ, ಪ್ರಾಯೋಗಿಕವಾಗಿ ಮೇಲ್ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು, ಈಇದಕ್ಕೆ ಜಿಲ್ಲಾಧಿಕಾರಿಯವರು ಸಹಮತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
ಟೋಲ್ಪ್ಲಾಝಾ ಸ್ಥಳಾಂತರ?
ಬಳಿಕ ಫರಂಗಿಪೇಟೆಗೆ ತೆರಳಿದ ಜಿಲ್ಲಾಧಿಕಾರಿಯವರು ಇತ್ತೀಚಿನ ಕೆಲ ದಿನಗಳಿಂದ ಕೇಳಿ ಬರುತ್ತಿರುವ ಟೋಲ್ ಪ್ಲಾಝಾವನ್ನು ಬ್ರಹ್ಮರಕೂಟ್ಲುವಿನಿಂದ ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರಿಸಬೇಕು ಎನ್ನುವ ಒತ್ತಾಯಕ್ಕೆ ಫರಂಗಿಪೇಟೆಯಲ್ಲಿ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳುವ ಬಗ್ಗೆ ರಾ.ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳೊದಿಗೆ ಅವರು ಚರ್ಚಿಸಿದರು. ಆದರೆ ಫರಂಗಿಪೇಟೆ ಟೋಲ್ ಪ್ಲಾಝಾ ಸ್ಥಳಾಂತರಕ್ಕೆ ಸೂಕ್ತ ಸ್ಥಳ ಅಲ್ಲ ಎನ್ನುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮನವರಿಕೆ ಮಾಡಿರುವುದಾಗಿ ತಿಳಿದು ಬಂದಿದೆ.ಮೇಲ್ಸೇತುವೆಯ ಕೆಳಭಾಗದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ವಾಹನದಟ್ಟಣೆ ನಿವಾರಿಸಲಾಗುವುದು, ಮೇಲ್ಸೇತುವೆಯ ದ್ವಿಮುಖ ವಾಹನ ಸಂಚಾರದಿಂದ ದೂರದೂರುಗಳ ವಾಹನಸವಾರರಿಗೆ, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.





