ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಳದ ನವೀಕರಣ ಸಲುವಾಗಿ ಫೆ.11ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಅಷ್ಟ ಪವಿತ್ರ ನಾಗಮಹೋತ್ಸವ ಜರುಗಲಿದ್ದು ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತದೊಂದಿಗೆ ಧಾರ್ಮಿಕ-ಸಾಂಪ್ರದಾಯಿಕ ” ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಇದೇ ಸಂದರ್ಭ ಹೊರೆಕಾಣಿಕೆ ಸಮರ್ಪಣೆ ಹಾಗೂ ಉಗ್ರಾಣ ಮುಹೂರ್ತವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ದೀಪ ಪ್ರಜ್ವಲನಗೊಳಿಸಿ ಶುಭ ಹಾರೈಸಿದರು.
ಬ್ರಹ್ಮ ಶ್ರೀ ಎಡಪದವು ವಿಷ್ಣುಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ಬ್ರಹ್ಮಶ್ರೀ ಎಡಪದವು ವೆಂಕಟೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳು ಜರಗಿದವು.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಮುಚ್ಚೂರು ಹರಿಭಟ್ ಪ್ರಧಾನ ಅರ್ಚಕ ಅನಂತ ಭಟ್, ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಐ.ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಶ್ರೀನಿವಾಸ ಭಟ್ ರಾಮಚಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮುಚ್ಚೂರು ಬಾಳಿಕೆ ಕುಟುಂಬಸ್ಥರ ವತಿಯಿಂದ ನೂತನವಾಗಿ ನಿರ್ಮಿಸಿದ ಶಿಲಾಮಯ ತೀರ್ಥಮಂಟಪವನ್ನು ಸಮರ್ಪಿಸಲಾುತು. ಈ ಸಂದರ್ಭದಲ್ಲಿ ಬಹು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
ಇಂದಿನ ಕಾರ್ಯಕ್ರಮ: ಬೆಳಿಗ್ಗೆ ಅರಣಿಮಥನ-ಅಗ್ನಿಜನನ, ಯಾಗ-ಪೂಜೆಗಳು, ಅನ್ನಸಮತರ್ಪಣೆ, ಸಂಜೆ ದುರ್ಗಾ ನಮಸ್ಕಾರ ಪೂಜೆ, ಸಪ್ತಶತೀ ಪಾರಾಯಣ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಬಾಲ ಕಲಾವಿದರಿಂದ ಯಕ್ಷಗಾನ ‘ಶಶಿಪ್ರಭೆ’ ಪ್ರದರ್ಶನಗೊಳ್ಳಲಿದೆ.



