ಬಂಟ್ವಾಳ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಮೆಲ್ಕಾರ್ ಪೇಟೆಯಲ್ಲಿ ಸುಸಜ್ಜಿತ ‘ಬಿರ್ವ ಟವರ್ಸ್’ ವಾಣಿಜ್ಯ ಮತ್ತು ವಸತಿ ಸಂಕೀರ್ಣ ನಿರ್ಮಾಣಗೊಂಡು ಇದೇ 31ರಂದು ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದು ಕಟ್ಟಡ ಮಾಲೀಕ ಚಂದ್ರಹಾಸ ಪೂಜಾರಿ ಬಟ್ಟಹಿತ್ಲು ತಿಳಿಸಿದ್ದಾರೆ.
ಮೆಲ್ಕಾರ್ ‘ಬಿರ್ವ ಸೆಂಟರ್’ನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನೂತನ ಕಟ್ಟಡವನ್ನು ಅಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಅಖಿಲ ಭಾರತ ಬಿಲ್ಲವರ ಮಹಾಮಂಡಲ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಮಾಜಿ ಅಧ್ಯಕ್ಷ ಎ. ಗೋವಿಂದ ಪ್ರಭು, ಸಾಮಾಜಿಕ ಸೇವಾಕರ್ತ ಕೆ. ಸೇಸಪ್ಪ ಕೋಟ್ಯಾನ್, ಅಖಿಲ ಭಾರತ ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ವಕೀಲ ಅಶ್ವನಿ ಕುಮಾರ್ ರೈ, ಉದ್ಯಮಿ ಸುಲೈಮಾನ್ ನಾರ್ಶ ಮತ್ತಿತರ ಗಣ್ಯರು ಭಾಗವಹಿಸುವು ಎಂದರು.
ಆಧುನಿಕತೆಗೆ ತಕ್ಕಂತೆ ‘ಬಿರ್ವ ಟವರ್ಸ್’ ನಿರ್ಮಾಣಗೊಂಡಿದ್ದು, ಕಟ್ಟಡವು ಒಟ್ಟು 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರ ತಳ ಮತ್ತು ನೆಲ ಹಾಗೂ ಪ್ರಥಮ ಮಹಡಿ ವಾಣಿಜ್ಯ ಉದ್ದೇಶಕ್ಕೆ, 2ನೇ ಮಹಡಿ ವಸತಿ ಸಂಕೀರ್ಣದ ವಾಹನ ನಿಲುಗಡೆಗೆ, 3 ಮತ್ತು 4ನೇ ಅಂತಸ್ತು ವಸತಿ ಸಂಕೀರ್ಣಕ್ಕೆ ತಕ್ಕಂತೆ ನಿರ್ಮಿಸಲಾಗಿದೆ.
ಕೊಳವೆ ಬಾವಿ ಶುದ್ಧೀಕರಿಸಿದ ಕುಡಿಯುವ ನೀರು ಮತ್ತು ಪರಿಸರ ಸ್ನೇಹಿ ಮಾದರಿಯಲ್ಲಿ ಕಟ್ಟಡ ರೂಪುಗೊಂಡಿದೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿರ್ವ ಸೆಂಟರ್ ಸಂಸ್ಥೆ ಪಾಲುದಾರ ಕೆ.ಸಂಜೀವ ಪೂಜಾರಿ ಮತ್ತಿತರರು ಇದ್ದರು.
