ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದಲ್ಲಿ 14ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವವು ಜ.23ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲೇ ಶಿಸ್ತುಬದ್ಧ ಮತ್ತು ಪ್ರತಿಷ್ಠಿತ ಕಂಬಳವೆಂದು ಗುರುತಿಸಿಕೊಂಡಿರುವ ಮೂಡುಬಿದರೆ ಕಂಬಳದಲ್ಲಿ ಈ ಬಾರಿ 190 ಜೋಡಿ ಓಟದ ಕೋಣಗಳು ಭಾಗವಹಿಸಲಿವೆ. ಪ್ರಾಣಿ ಹಿಂಸೆ ಆಗದಂತೆ ಗರಿಷ್ಠ ಎಚ್ಚರಿಕೆಯನನ್ನು ವಹಿಸಲಾಗುವುದು ಅಲ್ಲದೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಆಗದಂತೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದು ತಿಳಿಸಿದರು. ಈ ಬಾರಿಯ ಕಂಬಳದಲ್ಲಿ ರೈತರಿಗೆ ಗಂಜಿಯೂಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಮತ್ತು ಕೋಣಗಳ ಮೈ ತಂಪಾಗಿಸಲು ಪಕ್ಕದಲ್ಲಿಯೇ ನೀರಿನ ಹೊಂಡಗಳನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಆಲಂಗಾರು ಚರ್ಚಿನ ಧರ್ಮಗುರು ರೆ.ಫಾ.ಬೇಸಿಲ್ ವಾಸ್, ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ.ಈಶ್ವರ ಭಟ್ ಮತ್ತು ಪುತ್ತಿಗೆಯ ಇ.ಎಂ.ಶಾಫಿ ಸಾಬ್ ಜತೆಯಾಗಿ ಕಂಬಳವನ್ನು ಶನಿವಾರ ಬೆಳಿಗ್ಗೆ ಉದ್ಘಾಟಿಸಲಿದ್ದು, ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಜೆ ದಿ.ಫ್ಯಾಬಿಯನ್ ಬಿ.ಎಲ್.ಕುಲಾಸೊ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ, ವೈಟ್ಲಿಫ್ಟಿಂಗ್ ರಾಷ್ಟ್ರೀಯ ತರಬೇತುದಾರ ಪುಷ್ಪರಾಜ ಹೆಗ್ಡೆ ಹಾಗೂ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಬಾಲಪ್ರತಿಭೆ ಪಂಚಮಿ ಮಾರೂರನ್ನು ಸನ್ಮಾನಿಸಲಾಗುವುದು.
ಪಾರದರ್ಶಕ ಕಂಬಳ:
ವೇದಿಕೆ ಹಾಗೂ ಗ್ಯಾಲರಿಯಲ್ಲಿ ಕುಳಿತುಕೊಂಡಿರುವ ವೀಕ್ಷಕರು ಮತ್ತು ಜನರಿಗೆ ಕಂಬಳದ ಕೋಣವನ್ನು ಬಿಡುವಲ್ಲಿ ಮತ್ತು ತಲುಪುವಲ್ಲಿ ಸರಿಯಾಗಿ ನೋಡಲು ಎಲ್ಸಿಡಿ ಪರದೆಗಳನ್ನು ಹಾಕಲಾಗುವುದು ಮತ್ತು ನಿಖರತೆಯನ್ನು ಕಾಯ್ದುಕೊಳ್ಳಲು ಟೈಮರನ್ನು ಅಳವಡಿಸುವ ಮೂಲಕ ಕಂಬಳವನ್ನು ಪಾರದರ್ಶಕವಾಗಿ ಮಾಡಲಾಗುವುದು ಎಂದು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ ತಿಳಿಸಿದರು.
ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸಮಿತಿಯ ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಕಾರ್ಯದರ್ಶಿಗಳಾದ ಸುರೇಶ್ ಪ್ರಭು, ಚಂದ್ರಹಾಸ ಸನಿಲ್, ಪುರಸಭಾ ಸದಸ್ಯ ಅಬ್ದುಲ್ ಬಶೀರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
