ಬಂಟ್ವಾಳ: ಪಂಚೇಂದ್ರಿಯಗಳ ಪೈಕಿ ಕಣ್ಣಿನ ಮಹತ್ವ ಅರಿತುಕೊಂಡು ಪರಿಣತಿ ಹೊಂದಿದ ವೈದ್ಯರ ಮೂಲಕ ಸೂಕ್ತ ಸಮಯದಲ್ಲಿ ಕಣ್ಣಿನ ಪರೀಕ್ಷೆ ನಡೆಸಿದಾಗ ಮಾತ್ರ ಬಾಲ್ಯದಿಂದಲೇ ದೃಷ್ಟಿ ದೋಷ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸರ್ಕಾರ ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವ ಉಚಿತ ಪರೀಕ್ಷೆ ಮತ್ತು ಪೊರೆ ಶಸ್ತ್ರಚಿಕಿತ್ಸೆ ಶಿಬಿರದಿಂದ ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಮ್ರಾಜೇಶ್ ಹೇಳಿದರು.
ತಾಲ್ಲೂಕಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಉಚಿತ ಕಣ್ಣಿನ ಪರೀಕ್ಷೆ ಮತ್ತು ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಆರೋಗ್ಯ ಮಾಹಿತಿ ನೀಡಿದರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ರಾಯಿ ಪಂಚಾಯಿತಿ ಸದಸ್ಯ ರಾಘವ ಅಮೀನ್, ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಸಂಚಾಲಕ ರವೀಂದ್ರ ಪೂಜಾರಿ, ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ಸುಧೀರ್ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.
ಪ್ರಯೋಗಾಲಯ ತಂತ್ರಜ್ಞ ಬಸವರಾಜ್, ಸಹಾಯಕ ಶ್ರೀಧರ್, ಶುಶ್ರೂಷಕಿಯರಾದ ಸುನೀತಾ, ಗೀತಾ, ಚಂದ್ರಪ್ರಭಾ, ಸುಜಾತ ಮತ್ತಿತರರು ಇದ್ದರು.
