ಮೂಡುಬಿದಿರೆ: ಆಳ್ವಾಸ್ ವಿರಾಸತ್ 2015 ರ ಪ್ರಶಸ್ತಿಗೆ ಖ್ಯಾತ ಹಿನ್ನಲೆ ಗಾಯಕ ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ. ಡಿ. 24 ರಂದು ಪ್ರಶಸ್ತಿ ಫಲಕದೊಂದಿಗೆ 1 ಲಕ್ಷ ನಗದನ್ನು ನೀಡಿ ಅವರನ್ನು ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ:
ಹಿನ್ನಲೆ ಗಾಯನ ಕ್ಷೇತ್ರದಲ್ಲಿ ಎಸ್.ಪಿ. ಎಂದೇ ಚಿರಪರಿಚಿತರಾಗಿರುವ ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂರವರು ತನ್ನ ಕಂಠ ಶ್ರೀಮಂತಿಕೆಯಿಂದ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವವರು.

ಎಳವೆಯಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಚೆನ್ನೈನಲ್ಲಿ ನಡೆದ ಟ್ಯಾಲೆಂಟ್ ಸ್ಟಾಂಡಿಂಗ್ ಕಂಟೆಸ್ಟ್ನ ಮೂಲಕ ಬೆಳಕಿಗೆ ಬಂದ ಇವರು, ಶ್ರೀ ಶ್ರೀ ಮರ್ಯಾದಾ ರಾಮಣ್ಣ ತೆಲುಗು ಚಿತ್ರದ ಮೂಲಕ ಹಿನ್ನಲೆ ಗಾಯನ ಪ್ರಯಾಣವನ್ನು ಪ್ರಾರಂಭಿಸಿದರು.ತಮ್ಮ ಧ್ವನಿಯ ಇಂಪು, ಮಾಧುರ್ಯ, ಶಕ್ತಿ ಹಾಗೂ ಅನುಭವಿಸಿ ಹಾಡುವ ವಿಶೇಷತೆಗಳಿಂದ ಇವರು ಬಹುಬೇಗನೆ ಪ್ರಸಿದ್ಧಿಗೆ ಬಂದರು.ಇವರ 40 ವರ್ಷಗಳ ಗಾಯನ ಪಯಣದಲ್ಲಿ ಚಿತ್ರಗೀತೆ, ಭಕ್ತಿಗೀತೆಗಳ 35,000 ಕ್ಕಿಂತ ಹೆಚ್ಚು ಹಾಡುಗಳು ಧ್ವನಿಸುರುಳಿಗಳಾಗಿವೆ. ಸುಮಾರು 15 ಭಾಷೆಗಳಲ್ಲಿ ಮಾತೃಭಾಷೆಯೆಂಬಂತೆ ಸರಳವಾಗಿ ಇವರು ಹಾಡಿದ್ದಾರೆ. ವಿವಿಧ ಭಾಷೆಗಳ 45 ಚಿತ್ರಗಳಿಗಡೆ ಸಂಗೀತ ನಿರ್ದೇಶಿಸಿದ್ದಾರೆ. ವಿವಿಧ ಭಾಷೆಗಳ 45 ಚಿತ್ರಗಳಲ್ಲಿ ನಟಿಸಿದ್ದಾರೆ. 100 ಕ್ಕಿಂತಲೂ ಹೆಚ್ಚು ವಿವಿಧ ಭಾಷೆಗಳ ಚಿತ್ರಗಳಿಗೆ ಕಂಠದಾನ ಮಾಡಿದ್ದಾರೆ.ಚಿತ್ರ ನಿರ್ಮಾ ಪಕರಾಗಿಯೂ ಇವರು ಪ್ರಸಿದ್ಧರಾಗಿದ್ದಾರೆ. ಸಂಗೀತದ ಟಿ.ವಿ. ಕಾಯ್ಕ್ರಮಗಳಲ್ಲಿಯೂ ನಿರೂಪಕರಾಗಿ ತನ್ನ ಪ್ರತಿಭೆ ಅನಾವರಣ ಮಾಡಿದ್ದಾರೆ. ದೇಶ- ಪರದೇಶಗಳ ಸಂಘ ಸಂಸ್ಥೆಗಳ , ರಾಜ್ಯ ಸರ್ಕಾರಗಳ ಪ್ರತಿಷ್ಠಿತ ಪ್ರಶಸ್ತಿಗಳೆಲ್ಲವೂ ಇವರಿಗೆ ಸಂದಿವೆ. ವಿ.ವಿ.ಗಳು ಗೌರವ ಡಾಕ್ಟರೇಟ್ ನೀಡಿ ಇವರನ್ನು ಗೌರವಿಸಿದೆ. ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

