ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ವತಿಯಿಂದ ಗುರುವಾರ ಸಂಜೆ ಐದು ಗಂಟೆಗೆ ನಡೆದ ಪ್ರತಿಭಟನೆ ವೇಳೆ ದಿಡೀರ್ ಉಂಟಾದ ಕಲ್ಲು ತೂರಾಟದಿಂದ ಅಂಗಡಿ ಮಳಿಗೆ ಮತ್ತು ವಾಹನ ಗಾಜು ಹಾನಿಗೀಡಾದ ಘಟನೆ ನಡೆದಿದೆ.
ಮಡಿಕೇರಿಯಲ್ಲಿ ಈಚೆಗೆ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಉಂಟಾದ ಕಲ್ಲು ತೂರಾಟದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಪರವಾನಿಗೆ ಇಲ್ಲದೆ ಪ್ರತಿಭಟನೆ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಕೆಲವೊಂದು ಆಕ್ಷೇಪಾರ್ಹ ಶಬ್ದಗಳನ್ನು ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕಲ್ಲು ತೂರಾಟ ಆರಂಭಗೊಳ್ಳುತ್ತಿದ್ದಂತೆಯೇ ಪೊಲೀಸರು ಧಾವಿಸಿ ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರು ಸಹಿತ ಎಲ್ಲರನ್ನೂ ಓಡಿಸಿರುವುದಾಗಿ ನಗರ ಠಾಣಾಧಿಕಾರಿ ನಂದ ಕುಮಾರ್ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಕೆಲಹೊತ್ತು ಉದ್ವಿಗ್ನತೆ ಉಂಟಾಗಿ ಬಿ.ಸಿ.ರೋಡ್ನಿಂದ ಕೈಕಂಬ, ಶಾಂತಿ ಅಂಗಡಿತನಕ ಕಿಡಿಗೇಡಿಗಳು ಕೆಲವೆಡೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ತಡೆಯಲು ಮುನ್ನುಗ್ಗಿದ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಅವರ ತಲೆಗೂ ಕಲ್ಲಿನ ಏಟು ತಗುಲಿದೆ. ಎಎಸ್ಪಿ ರಾಹುಲ್ ಕುಮಾರ್, ಗ್ರಾಮಾಂತರ ಮತ್ತು ನಗರ ಠಾಣಾಧಿಕಾರಿ ರಕ್ಷಿತ್ ಕುಮಾರ್ ಮತ್ತು ನಂದಕುಮಾರ್ ನೇತೃತ್ವದ ಹೆಚ್ಚುವರಿ ಪೊಲೀಸರು ತಕ್ಷಣವೇ ಬಿಗಿ ಬಂದೋಬಸ್ತು ಏರ್ಪಡಿಸಿ ಪರಿಸ್ಥಿತಿ ಹತೋಟಿಗೆ ತಂದಿರುವುದಾಗಿ ತಿಳಿಸಿದ್ದಾರೆ.
ಅಂಗಡಿ ಬಂದ್ಗೆ ಸೂಚನೆ
ಕಲ್ಲು ತೂರಾಟದಿಂದ ಇಲ್ಲಿನ ವಿಜಯಲಕ್ಷ್ಮಿ ಸಿಮೆಂಟ್ ಮತ್ತು ಸ್ಟೀಲ್ ಮಾರಾಟ ಮಳಿಗೆ ಗಾಜು ಮತ್ತು ಪಿಕಪ್ ವಾಹನಕ್ಕೆ ಹಾನಿಗೀಡಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಸಂದರ್ಭದ ತಳ್ಳಾಟದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು. ಬೆಳ್ಳಿಯಪ್ಪ ಅವರ ತಲೆಗೆ ಕಲ್ಲು ತೂರಾಟದಿಂದ ಗಾಯವಾಗಿದೆ.
ಐಜಿಪಿ ಭೇಟಿ:
ಗುರುವಾರ ರಾತ್ರಿ ಐಜಿಪಿ ಅಮೃತ್ಪಾಲ್ ಭೇಟಿ ನೀಡಿ ಪರಿಶೀನೆ ನಡೆಸಿದ್ದು, ತಹಶೀಲ್ದಾರ್ಗೆ ಮನವಿ ನೀಡಲು ಹೋದಾಗ ಕಲ್ಲು ತೂರಾಟ ಆಗಿದೆ ಎಂದಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಸಾಮಾಜಿಕ ಜಾಲ ತಾಣದಲ್ಲಿ ಗಾಸಿಪ್ ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಬಿ.ಸಿ.ರೋಡ್ ಪೇಟೆಯಲ್ಲಿ ಎಲ್ಲಾ ಅಂಗಡಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದ್ದು, ಕಾನೂನು ವಿರುದ್ದ ಕಿಡಿಗೇಡಿ ಕೃತ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಡಾ. ಶರಣಪ್ಪ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಮನವಿ ಬಂದಿಲ್ಲ: ತಹಶೀಲ್ದಾರ್
ಜಿಲ್ಲಾಕಾರಿ ಸೂಚನೆಯಂತೆ ಯಾವುದೇ ಸಭೆ ಸಮಾರಂಭ ನಡೆಸಲು ಅನುಮತಿ ನೀಡಿಲ್ಲ. ಇಲ್ಲಿನ ನಡೆದ ಪ್ರತಿಭಟನೆ ಬಗ್ಗೆಯೂ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

