ಮೂಡುಬಿದರೆ: ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಹೃದಯ ಸಂಬಂಧಿ ಕಾಯಿಲೆಗಳ ಒಂದು ದಿನದ ಉಚಿತ ಆರೋಗ್ಯ ತಪಾಸಣೆ, ಸಲಹೆ ಹಾಗೂ ಜನ ಜಾಗೃತಿ ಶಿಬಿರವನ್ನು ಕಡಂದಲೆ ಪಲ್ಕೆಯಶ್ರೀ ಗಣೇಶ ದರ್ಶನ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು.
ಕಡಂದಲೆ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ನ ಅಧ್ಯಕ್ಷ ಸುದರ್ಶನ ಶೆಟ್ಟಿ ಚಾಲನೆ ನೀಡಿದರು. ಕಡಂದಲೆ ಲಯನ್ಸ್ ಕ್ಲಬ್ ಅಧ್ಯಕ್ಷ ವಿಕ್ಟರ್ ಸಿಕ್ವೇರ ಅಧ್ಯಕ್ಷತೆವಹಿಸಿದ್ದರು. ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿನಯಚಂದ್ರ ಶೆಟ್ಟಿ, ಪ್ರಾಂಶುಪಾಲರು, ಕಾಲೇಜಿನ ಶರೀರ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸ್ವಪ್ನ ಉಪಸ್ಥಿತರಿದ್ದರು. ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಸುಕೇಶ್ ಎ, ಡಾ.ಆದಿತ್ಯ ಭಟ್, ಡಾ.ಸ್ವಪ್ನ, ಡಾ.ಪೂಜಾ ರಾಣಿ ಕೆ.ಪಿ, ಡಾ.ಪ್ರಸನ್ನ ಎಸ್ ಹಾಗೂ ಸ್ನಾತಕೋತ್ತರ ಹಾಗೂ ಕಲಿಕಾ ವಿದ್ಯಾರ್ಥಿಗಳು ತಪಾಸಣೆ ನಡೆಸಿದರು. ಪ್ರಸನ್ನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತ ಇ.ಸಿ.ಜಿ ತಪಾಸಣೆಯನ್ನು ನಡೆಸಲಾಯಿತು. 100ಕ್ಕೂ ಅಧಿಕ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಮೂಡುಬಿದರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶರೀರ ರಚನಾ ಸ್ನಾತಕೋತ್ತರ ವಿಭಾಗ, ಕಡಂದಲೆ ಪ್ರಾಥಮಿಕ ಹಾಲು ಉತ್ಪಾದಕರ ಸಂಸ್ಥೆ ಹಾಗೂ ಕಡಂದಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶಿಬಿರ ಹಮ್ಮಿಕೊಳ್ಳಲಾಯಿತು.
