ಮೂಡುಬಿದರೆ: ಯೇನೆಪೋಯಾ ಸಮೂಹ ಶಿಕ್ಷಣ ಸಂಸ್ಥೆ ಅಡಳಿತದಲ್ಲಿರುವ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ತೋಡಾರು ಕ್ಯಾಂಪಸ್ನಲ್ಲಿ ಎಂಜಿನಿಯರ್ಸ್ ಡೇ ಹಾಗೂ ಶಿಕ್ಷಕರ ದಿನ ಆಚರಿಸಲಾಯಿತು.
ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸರ್ವಪಳ್ಳಿ ರಾಧಾಕೃಷ್ಣರವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು ಹಾಗೂ ವಿ.ಟಿ.ಯು ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಇ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಐದು ವರ್ಷಕ್ಕೂ ಮೇಲ್ಟಟ್ಟು ಸೇವೆ ಸಲ್ಲಿಸಿದ ಅಧ್ಯಾಪಕರನ್ನು ಸನ್ಮಾನಿಸಲಾಯಿತು.
ರಾಜ್ಯ ಮಟ್ಟದ ಕೆ.ಎಸ್.ಸಿ.ಎಸ್.ಟಿ. ಪ್ರೊಜೆಕ್ಟ್ ಸ್ಪರ್ಧೆಯಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶಕರನ್ನು ಸನ್ಮಾನಿಸಲಾಯಿತು.ವಿವಿಧ ಭಾಗಗಳಲ್ಲಿ 100% ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಮತ್ತು ಪ್ರಾಧ್ಯಾಪಕರನ್ನು ಅಭಿನಂದಿಸಲಾಯಿತು.
ಸುರತ್ಕಲ್ನ ಎನ್.ಐ.ಟಿ.ಕೆ ಡೀನ್ ಡಾ. ಎಂ.ಎ. ನರಸಿಂಹನ್ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಈಗಿನ ಜಾಗತಿಕ ಜಗತ್ತಿನ ಆಗುಹೋಗುಗಳಿಗೆ ಸಮಾನವಾಗಿ ಅನ್ವಯಿಸುವಂತೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಶನ್ ಅಧ್ಯಕ್ಷ ಪ್ರೊ.ಪಿ.ಸಿ.ಎಮ್ ಕುಂಞ ವಹಿಸಿದರು. ಯೇನೆಪೋಯಾ ಯುನಿವರ್ಸಿಟಿ ಡೈರೆಕ್ಟರ್ ಆಫ್ ಆಪರೇಷನ್ಸ್ ಯೇನೆಪೋಯಾ ಅಬ್ದುಲ್ಲಾ ಜಾವೇದ್, ಎಂ.ವಿ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಡಾ.ವಿವೇಕಾನಂದ ವಿ. ವರ್ಣೇಕರ್ ಉಪಸ್ಥಿತರಿದ್ದರು.
ಎಲೆಕಿಕ್ಟ್ರಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್ ಸರ್.ಎಂ.ವಿಶ್ವೇಶ್ವರಯ್ಯ ಕುರಿತು ಮಾತನಾಡಿದರು. ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸದಾನಂದ ಕುಮಾರ್ ಸರ್ವಪಳ್ಳಿ ರಾಧಾಕೃಷ್ಣರವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಪ್ರಾಂಶುಪಾಲ ಡಾ.ಸಂದೀಪ್ ಜೆ. ನಾಯಕ್ ಸ್ವಾಗತಿಸಿದರು.
ಶ್ವೇತಾ ಕಾಮತ್ ಹಾಗೂ ಸುಮನಾ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್ ಬಸವರಾಜ್ ಕಂಬಾಳೆ ವಂದಿಸಿದರು. ಜಯಶ್ರೀ ಪಿ. ಕಾರ್ಯಕ್ರಮ ಸಂಯೋಜಿಸಿದರು.

