ಮಂಗಳೂರು: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಶಿಕ್ಷಕರು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಕ್ಕಳನ್ನು ದೇಶದ ಸಂಪನ್ಮೂಲರನ್ನಾಗಿಸಬೇಕೆಂದು ಎಂದು ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಹೇಳಿದ್ದಾರೆ.
ಮಕ್ಕಳ ಹಕ್ಕುಗಳ ವೇದಿಕೆ, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಇದರ ಆಶ್ರಯದಲ್ಲಿ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ನ ಸಹಯೋಗದೊಂದಿಗೆ ಕಂಕನಾಡಿಯ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಮಂಗಳವಾರ ಆರಂಭಗೊಂಡ ಮಕ್ಕಳ ಹಕ್ಕುಗಳ ಕುರಿತಾಗಿ ಶಿಕ್ಷಕರಿಗೆ 2 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ತಾಯಿ ಪ್ರೀತಿಯನ್ನು ಬಯಸುತ್ತಾರೆ, ಅದನ್ನು ನೀಡಿ ಎಂದು ಶಿಕ್ಷಕರಿಗೆ ಮನವಿ ಮಾಡಿದ ಅವರು, ಮಕ್ಕಳನ್ನು ಪ್ರೀತಿಯಿಂದ ಶಿಸ್ತಿಗೆ ಒಳಪಡಿಸುವಂತೆ ಕರ ನೀಡಿದರು. ಶಿಕ್ಷಕ ಹುದ್ದೆ ಮಕ್ಕಳೆಂಬ ದೇವರ ಜೊತೆ ಕೆಲಸ ಮಾಡಲು ಸಿಕ್ಕ ಭಾಗ್ಯವಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿ ದೇವರ ಪ್ರೀತಿಗೆ ಪಾತ್ರರಾಗಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ವಶಿಕ್ಷಕ ಅಭಿಯಾನದ ಸಮನ್ವಯಾಧಿಕಾರಿ ಜೇಮ್ಸ್ ಕುಟಿನ್ಹಾ ಮಾತನಾಡಿ, ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ಕುರಿತಾಗಿ ತರಬೇತಿ ನೀಡುವ ಮೂಲಕ ಪ್ರಜ್ಞಾ ಮಾದರಿ ಕಾರ್ಯ ನಡೆಸುತ್ತಿದೆ, ಇಂತಹ ತರಬೇತಿ ಜಿಲ್ಲೆಯಾದ್ಯಂತ ವಿಸ್ತಾರಗೊಳ್ಳಬೇಕಿದೆ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ಜಿ.ರಾವ್ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಹಿರಿಯರು ಹೆಚ್ಚು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಶಾಲಾ ಶಿಕ್ಷಕರು ತಾವು ಈ ಕುರಿತು ತಿಳಿದುಕೊಂಡು ಮಕ್ಕಳ ಹಕ್ಕುಗಳ ಕುರಿತಾಗಿ ಪೋಷಕರಿಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು. ಬಾಲವಿಕಾಸ ಅಕಾಡೆಮಿಯ ಜಿಲ್ಲಾಸಮಿತಿ ಸದಸ್ಯ ಮೌನೇಶ ವಿಶ್ವಕರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಕೆಎಸ್ ಯೋಜನೆಯ ಸಂಯೋಜಕ ವಿಲಿಯಂ ಸ್ಯಾಮುವೆಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಶೀಲಾ ಶೆಟ್ಟಿ ಸ್ವಾಗತಿಸಿದರು. ಸುನೀತಾ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
