ಬಂಟ್ವಾಳ: ಎಂಆರ್ಪಿಎಲ್ ಸಂಸ್ಥೆಗೆ ಸೇರಿದ ಹೈ ಪ್ರೆಶರ್ ಪೆಟ್ರೋಲಿಯಂ ತೈಲ ಸಾಗಾಟದ ಪೈಪ್ಲೈನ್ನಿಂದ ಡಿಸೇಲ್ ಸೋರಿಕೆಯಾದ ಘಟನೆ ಬುಧವಾರ ಮುಂಜಾವಿನ ವೇಳೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಅಲ್ಲಾರು ಬಳಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಪುರೈಕೆಯಾಗುವ ತೈಲ ಪೈಲ್ಲೈನ್ ಮಣ್ಣಿನಡಿ ಸ್ಪೋಟಗೊಂಡು ಈ ಸೋರಿಕೆಯಾಗಿದ್ದು ಘಟನೆಯಿಂದ ಪಂಜಿಕಲ್ಲು ಗ್ರಾಮದ ಜನತೆ ಆತಂಕಕ್ಕೀಡಾಗ ಬೇಕಾಯಿತು. ಅದೃಷ್ಠವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.


ಎಂಆರ್ಪಿಎಲ್ ಸಂಸ್ಥೆಯ ತೈಲ ಸಾಗಾಟದ ಪೈಪ್ಲೈನ್ ಪಂಜಿಕಲ್ಲು ಗ್ರಾಮದ ಮೂಲಕ ಬೆಂಗಳೂರಿಗೆ ಹಾದು ಹೋಗಿದೆ. ಬುಧವಾರ ಮುಂಜಾನೆ 2.30ರ ವೇಳೆಗೆ ಸಿಡಿಲು ಬಡಿದು ಪೈಪ್ಲೈನ್ ಸ್ಪೋಟಗೊಂಡು ಡಿಸೇಲ್ ಸೋರಿಕೆ ಪ್ರಾರಂಭಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂಜಾನೆ 6 ಗಂಟೆಯ ವೇಳೆಗೆ ಡಿಸೇಲ್ ಬುಗ್ಗೆಯಂತೆ ಚಿಮ್ಮುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪಕ್ಕದಲ್ಲೇ ಇರುವ ಸೂಚನೆ ಫಲಕದಲ್ಲಿ ಬರೆಯಲಾಗಿರುವ ಸುಕ್ಷತಾ ಕಾಲ್ ಸೆಂಟರ್ ಸಂಖ್ಯೆಗೆ ದೂರವಾಣಿಯ ಮೂಲಕ ವಿಷಯ ತಿಳಿಒಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾರು ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 200 ಮೀಟರ್ ದೂರದ ವರೆಗೆ ಡಿಸೇಲ್ ಹರಿದು ಹೋಗಿದ್ದು ಪರಿಸರವಿಡಿ ಅದರ ವಾಸನೆಯೇ ತುಂಬಿ ಹೋಗಿದೆ. ಕಾಲ್ಸೆಂಟರ್ಗೆ ನಿರಂತರ ದೂರವಾಣಿಯ ಮೂಲಕ ಸಂಪರ್ಕ ಸಾಧಿಸಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಗಿದೆ, 9.30ರ ವೇಳೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೋರಿಕೆಯನ್ನು ತಾತ್ಕಲಿಕವಾಗಿ ತಡೆಗಟ್ಟಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.







