ಮೂಡುಬಿದರೆ: ಮೂಲ್ಕಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ಪದ್ಮನಾಭ ಎಂಬವರ ಮೂಡುಬಿದರೆ ಬಾಡಿಗೆ ಮನೆಗೆ ಲೋಕಾಯುಕ್ತ ತಂಡ ಮಂಗಳವಾರ ಮುಂಜಾನೆ ದಾಳಿ ನಡೆಸಿದೆ.

ಮೂಡುಬಿದರೆ ಪುರಸಭೆಯಿಂದ 6 ತಿಂಗಳ ಹಿಂದೆ ಮೂಲ್ಕಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆಯಾಗಿದ್ದ ಇಂಜಿನಿಯರ್ ಪದ್ಮನಾಭ್ ಮೂಡುಬಿದರೆ ಜ್ಯೋತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಾರ್ವಜನಿಕ ದೂರು ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್.ಪಿ. ಎಚ್.ಡಿ ಮಂಡೋನ್ಸಾ ನಿರ್ದೇಶನದ 6 ಜನರ ತಂಡ ಪದ್ಮನಾಭ್ ಅವರ ಮನೆಗೆ ಮಂಗಳವಾರ ಮುಂಜಾನೆ 6.30ಕ್ಕೆ ದಾಳಿ ನಡೆಸಿದೆ. ತನಿಖೆ ವೇಳೆ ಬ್ಯಾಂಕ್ ದಾಖಲೆ, ಸಹಿತ ವಿವಿಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಪುರಸಭೆಯ ಕೆಲವು ದಾಖಲೆಗಳು ಹಾಗೂ ಸಂಬಂಧಿಕರ ಜಾಗದ ದಾಖಲೆಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬಳಿಕ ಮೂಲ್ಕಿ ಪಟ್ಟಣ ಪಂಚಾಯಿತಿ ಕಚೇರಿಗೂ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ವಿಠಲದಾಸ್ ಪೈ, ದಿಲೀಪ್ ಕುಮಾರ್, ವಿಜಯಪ್ರಸಾದ್, ತನಿಖಾಧಿಕಾರಿ ನವೀನ್ ಚಂದ್ರ, ಉಡುಪಿ ಇನ್ಸ್ಪೆಕ್ಟರ್, ಉಡುಪಿ ಲೋಕಾಯುಕ್ತ ಇನ್ಸ್ಪೆಕ್ಟರ್ ಕೃಷ್ಣಾನಂದ ,ಮೋಹನ್ ಕೊಠಾರಿ ಲೋಕಾಯುಕ್ತ ತಂಡದಲ್ಲಿದ್ದರು.
