ಉಳ್ಳಾಲ: ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಉಳ್ಳಾಲ ಸಯ್ಯದ್ ಮದನಿ ದರ್ಗಾದ 423ನೇ ವಾರ್ಷಿಕ ಮತ್ತು 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಕೊನೆಯ ಶನಿವಾರ ರಾತ್ರಿ 8.30ಕ್ಕೆ ಆರಂಭಗೊಂಡ ಅನ್ನದಾನ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿ 7 ಗಂಟೆ ತನಕ ನಿರಂತರ ನಡೆಯಿತು. 26 ಟನ್ ಅಕ್ಕಿ , 11.5 ಟನ್ ಆಡು ಮಾಂಸದಲ್ಲಿ ತಯಾರಿಸಿದ ಅನ್ನಪ್ರಸಾದ(ಸೀರ್ಣಿ)ಯನ್ನು 3ಲಕ್ಷಕ್ಕೂ ಅಧಿಕ ಭಕ್ತರು ಸ್ವೀಕರಿಸಿ ಕೃತಾರ್ಥರಾದರು.


ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ಬುಖಾರಿಯವರ ನೇತೃತ್ವದಲ್ಲಿ ಹಾಗೂ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ ಅವರ ಸಮರ್ಥ ನಾಯಕತ್ವದಲ್ಲಿ ಎಪ್ರಿಲ್ 2ರಿಂದ ಪ್ರಾರಂಭಗೊಂಡು 26ರ ತನಕ ನಡೆದ 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭ ವಿಜೃಂಭಣೆಯ ಆರಂಭದಂತೆ ವಿಜೃಂಭಣೆಯ ಮುಕ್ತಾಯವನ್ನು ಕಂಡಿತು. ದೇಶ ವಿದೇಶದಿಂದ ಸುಮಾರು 30ಲಕ್ಷಕ್ಕೂ ಅಧಿಕ ಭಕ್ತರನ್ನು ಉರೂಸ್ಗೆ ಸೆಳೆದ ಉಳ್ಳಾಲದ ಮೊದಲ ಉರೂಸ್ ಎಂಬ ದಾಖಲೆಗೆ ಈ ಬಾರಿಯ ಉರೂಸ್ ಪಾತ್ರವಾಯಿತು.ಸುಮಾರು ಒಂದು ವಾರದಿಂದ ಆರಂಭಗೊಂಡ ಅನ್ನಪ್ರಸಾದ ತಯಾರಿಸುವ ಕಾಯಕದಲ್ಲಿ 180ಜನ ಅಡುಗೆ ಸಿಬ್ಬಂದಿಗಳು ಭಾಗವಹಿಸಿದ್ದರು. ಉಳ್ಳಾಲ, ಕಾಸರಗೋಡು, ಮಂಜೇಶ್ವರ, ಕೊಣಾಜೆ, ಉಡುಪಿ ಹಾಗೂ ಚಿಕ್ಕಮಗಳೂರಿನ ಪಾಕತಜ್ಞರು ಕಾಯಕದಲ್ಲಿ ತೊಡಗಿಸಿಕೊಂಡರು. 10ಸಾವಿರ ಅಲ್ಯುಮಿನಿಯಂ ಪ್ಲೇಟ್ ಬಳಸುವ ಮೂಲಕ ಏಕಕಾಲದಲ್ಲಿ 6 ಸಾವಿರ ಭಕ್ತರಿಗೆ ಕುಳಿತುಕೊಂಡು ಊಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಕೈಗೆ ಊಟದ ಬಟ್ಟಲು ತಲುಪಿಸಲು, ಬಡಿಸಲಿಕ್ಕೆ ತಲಾ ಒಂದು ಸಾವಿರ ಸ್ವಯಂಸೇವಕರು ನಿರಂತರ ಸೇವೆಗೈದರು. ಪ್ಲೇಟ್ ತೊಳೆಯಲು ಒಂದು ಸಾವಿರ ಸಿಬ್ಬಂದಿ ನೇಮಿಸಲಾಗಿತ್ತು. ಊಟಕ್ಕೆ ಬಿಡುವ ಮುಖ್ಯ ದ್ವಾರದಿಂದ ಊಟದ ಚಪ್ಪರಕ್ಕೆ ಬರುವಾಗ ಐದು ದ್ವಾರ ದಾಟಿ ಬರಬೇಕು. ಎಲ್ಲೂ ಕೂಡಾ ಪುರುಷ ಹಾಗೂ ಮಹಿಳೆಯರು ಒಂದೇ ದ್ವಾರದಲ್ಲಿ ಸಾಗುವಂತಿರಲಿಲ್ಲ. ಒಂದೊಂದು ದ್ವಾರದಿಂದ ತಲಾ ಒಂದು ಸಾವಿರದಂತೆ ಐದು ಸಾವಿರ ಜನರು ಒಳಗೆ ಹೋಗಿ ಊಟ ಮಾಡಲು ವ್ಯವಸ್ಥೆ ಕಲ್ಪಿಸಿದ್ದರಿಂದ 23 ಗಂಟೆಗಳಲ್ಲಿ 3 ಲಕ್ಷ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಪೂರ್ಣ ಅಡುಗೆಗೆ 60 ಟನ್ ಕಟ್ಟಿಗೆ ಬಳಕೆ ಮಾಡಲಾಯಿತು. ದರ್ಗಾಕ್ಕೆ ಹರಕೆಯ ರೂಪದಲ್ಲಿ ಬಂದ ಆಡುಗಳಲ್ಲಿ ಈ ಬಾರಿ ಅತಿ ದೂರದಿಂದ ಮಹಾರಾಷ್ಟ್ರ, ತಮಿಳುನಾಡು, ಕೇರಳ ಭಾಗದಿಂದ ಹೆಚ್ಚಿನ ಭಕ್ತರು ನೀಡಿದ್ದರು.
ಶಿಸ್ತಿನಲ್ಲಿ ಸ್ವಯಂಸೇವಕರ ಪಾತ್ರ: 30 ಲಕ್ಷ ಜನರನ್ನು ನಿಯಂತ್ರಣದಲ್ಲಿಡುವುದು ಸುಲಭದ ಮಾತಲ್ಲ. 25 ದಿನಗಳವರೆಗೆ ನಡೆದ ಉರೂಸು ಸಮಾರಂಭದಲ್ಲಿ ಎಲ್ಲಿಯೂ ಅಶಾಂತಿ ನಡೆಯದ ರೀತಿಯಲ್ಲಿ ಪೊಲೀಸ್ ಮತ್ತು ಸ್ವಯಂಸೇವಕರ ಪಾತ್ರ ಮೆಚ್ಚುಗೆಗೆ ಪಾತ್ರವಾಯಿತು. ಉಳ್ಳಾಲ ದರ್ಗಾ ಅಧೀನದ ಒಟ್ಟು ಐದು ಕರಿಯಗಳಾದ ಮೇಲಂಗಡಿ, ಕೋಟೆಪುರ, ಅಲೇಕಲ, ಮುಕ್ಕಚ್ಚೇರಿ ಹಾಗೂ ಕಲ್ಲಾಪುವಿನಿಂದ ತಲಾ ಒಂದೊಂದು ಕರಿಯದಿಂದ 500 ಮಂದಿಯಂತೆ 2500 ಮಂದಿ ಸ್ವಯಂಸೇವಕರ ನಿರಂತರ ಸೇವೆಗೈದರು. ಅವರನ್ನು ನಿಯಂತ್ರಿಸಲು 40 ಜನ ಲೀಡರ್ಗಳು ಮತ್ತು 5 ಮಂದಿ ಕ್ಯಾಪ್ಟನ್ ಕಾರ್ಯ ನಿರ್ವಹಿಸಿದರು.


