ಯಂತ್ರೋಪಕರಣ, ಬೋಟ್ ನಾಪತ್ತೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸರಪಾಡಿ ನೇತ್ರಾವತಿ ನದಿಯಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ದಂಧೆ ಯಂತ್ರೋಪಕರಣ ಮೂಲಕ ನಡೆಯುತ್ತಿದೆ ಎಂದು ಸ್ಥಳೀಯರಿಂದ ಕೇಳಿ ಬಂದಿದ್ದ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಸೋಮವಾರ ನಡೆಸಿದ ದಿಢೀರ್ ಕಾರ್ಯಾಚರಣೆ ವೇಳೆ ಯಂತ್ರೋಪಕರಣ ಮತ್ತು ಬೋಟ್ ಸಹಿತ ಮರಳುಗಾರರು ಕಾಲ್ಕಿತ್ತ ಘಟನೆ ನಡೆದಿದೆ.

ಇಲ್ಲಿನ ಸರಪಾಡಿ ಶರಭೇಶ್ವರ ದೇವಸ್ಥಾನ, ಕೊಟ್ಟಿಂಜ ಮತ್ತಿತರ ಕಡೆ ನೇತ್ರಾವತಿ ನದಿಯಲ್ಲಿ ಬೃಹತ್ ಯಂತ್ರೋಪಕರಣ ಮೂಲಕ ಅಕ್ರಮ ಮರಳುಗಾರಿಕೆ ದಂಧೆ ಕಳೆದ ಹಲವು ಸಮಯದಿಮದ ನಡೆಯುತ್ತಿದೆ ಎಂದು ಸ್ಥಳೀಯರು ದೂರಿಕೊಂಡಿದ್ದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ಸಾಧು ನೇತೃತ್ವದ ಇಲಾಖಾಧಿಕಾರಿಗಳು ಸೋಮವಾರ ದಿಢೀರ್ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ನದಿತೀರದಲ್ಲಿ ಅಳವಡಿಸಲಾಗಿದ್ದ ಬೃಹತ್ ಯಂತ್ರೋಪಕರಣ, ಪೈಪ್, ಬೋಟ್ ಮತ್ತಿತರ ಸಾಮಾಗ್ರಿಗಳನ್ನು ಮರಳುಗಾರರು ತರಾತುರಿಯಲ್ಲಿ ತೆರವುಗೊಳಿಸಿರುವುದು ಕಂಡು ಬಂದಿದೆ. ಗ್ರಾಮಕರಣಿಕ ಯೋಗಾನಂದ, ಗ್ರಾಮ ಸಹಾಯಕ ಬಾಬು ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
