ಬಂಟ್ವಾಳ: ಗ್ರಾಮಕರಣಿಕ ಹಾಗೂ ಕಂದಾಯ ನಿರೀಕ್ಷಕ ಎನ್ನುವ ಹುದ್ದೆ ಗ್ರಾಮೀಣಪ್ರದೇಶಗಳಲ್ಲಿ ಬಡಜನರ ಸೇವೆ ಮಾಡಲು ಸಿಕ್ಕ ದೊಡ್ಡ ಅವಕಾಶ, ಇದನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ಗ್ರಾಮದ ನೊಂದಕುಟುಂಬಗಳಿಗೆ ಸರ್ಕಾರದ ಸವಲತ್ತು ಒದಗುವಂತೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕಡೇಶ್ವಾಲ್ಯ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ಗ್ರಾಮಭೇಟಿ ನಡೆಸಿದ ಸಚಿವರು, ಕಡೇಶ್ವಾಲ್ಯ ಸರ್ಕಾರಿ ಶಾಲೆಯಲ್ಲಿ ನಡೆದ ಅಹವಾಲು ಸ್ವೀಕಾರ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು ಕಷ್ಟದ ಜೀವನ ನಡೆಸಿಯೇ , ಈ ಹುದ್ದೆಗೆ ಬಂದವರು, ಜನರ ಕಷ್ಟ-ನಷ್ಟದ ಬಗ್ಗೆ ಅವರಿಗೆ ಅರಿವಿರುತ್ತದೆ, ಇವರು ಇದನ್ನು ಬಡಜನರ ಏಳಿಗೆಗಾಗಿ ಬಳಸುವಂತೆ ಅವರು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಗ್ರಾ.ಪಂ ಸದಸ್ಯರಾದ ಶೀನನಾಯ್ಕ, ಪುರುಷೋತ್ತಮ ಶೆಟ್ಟಿ, ವಿಜಯಕುಮಾರ್, ಹರಿಶ್ಚಂದ್ರಭಂಡಾರಿ, ಅಪೋಲಿನ್ ಪಿಂಟೋ, ತಾ.ಪಂ.ಸಹಾಯಕ ನಿರ್ದೇಶಕಿ ದಯಾವತಿ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಜಯಮಾಲ, ಕಂದಾಯ ನಿರೀಕ್ಷಕ ನಾಯಾಣ ಪೂಜಾರಿ, ಗ್ರಾಮಕರಣಿಕ ಶಿವಪ್ಪ, ಉಪಸ್ಥಿರಿದ್ದರು.
ಇದೇ ವೇಳೆ ಸಚಿವರು ಕಡೇಶ್ವಾಲ್ಯ ಗ್ರಾಮದಲ್ಲಿ 5 ಲಕ್ಷ ವೆಚ್ಚದ ಸೂರಂಗೋಲು-ನಚ್ಚಬೆಟ್ಟು ರಸ್ತೆಯ ಡಾಮರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ವಿವಿಧ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿದರು.
