ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕುಕ್ಕರಬೆಟ್ಟು ಹೊಸಮನೆ ನಿವಾಸಿ ರಾಮಣ್ಣ ಸಾಲಿಯಾನ್ ಅವರ ಪುತ್ರಿ ಭಾಗ್ಯಶ್ರೀಯ ಸಜೀವ ದಹನ ಪ್ರಕರಣದ ಕುರಿತು ಕೂಲಂಕೂಶ ತನಿಖೆ ನಡೆಸುವಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ, ಬಂಟ್ವಾಳ ಎಎಸ್ಪಿ ರಾಹುಲ್ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಭಾಗ್ಯಶ್ರೀ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾಳೆ, ಇವಳ ತಂದೆ ಕೂಲಿ ಕೆಲಸ ಮಾಡುತ್ತಿದ್ದು ತಾಯಿ ಸ್ಥಳೀಯ ಶಾಲೆಯೊಂದರಲ್ಲಿ ಬಿಸಿಯೂಟ ಅಡಿಗೆ ಮಾಡುತ್ತಿದ್ದಾರೆ. ಈ ಕುಟುಂಬ ಬಡತನದಲ್ಲಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಕಷ್ಟಪಟ್ಟು ದುಡಿಯುತ್ತಿದ್ದರು. ಘಟನೆಯನ್ನು, ಭಾಗ್ಯಶ್ರೀಯ ಮೃತ ಶರೀರವನ್ನು ಮತ್ತು ಮನೆಯ ವ್ಯವಸ್ಥೆಯನ್ನು ನೋಡಿದಾಗ ಇದೊಂದು ವ್ಯವಸ್ಥಿತ ಕೊಲೆಯೆಂಬಂತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ ಬಿಜೆಪಿ ನಿಯೋಗ ಈ ಮೂಲಕ ಮೃತ ವಿದ್ಯಾರ್ಥಿನಿಯ ಶೋಕತಪ್ತ ಕುಟುಂಬದ ಸದಸ್ಯರಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ನಿಯೋಗದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರ.ಕಾರ್ಯದರ್ಶಿ ರಾಮ್ದಾಸ್, ಜಿ.ಪಂ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
