ಬಂಟ್ವಾಳ:ತಾಲ್ಲೂಕಿನ ಸಜೀಪಮುನ್ನೂರು ಗ್ರಾಮ ನಂದಾವರ ನೇತ್ರಾವತಿ ನದಿತೀರದಲ್ಲಿ ಕಳೆದ ಹಲವು ಸಮಯದಿಂದ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕೂಡಲೇ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಸಜಿಪಮುನ್ನೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಗ್ರಾ.ಪಂ.ಸದಸ್ಯ ಪ್ರವೀಣ್ ಗಟ್ಟಿ ಮತ್ತು ಇದಿನಬ್ಬ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲವೊಂದು ಜನಪ್ರತಿನಿಧಿಗಳು ಸಹಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ದಿಕ್ಕಾರ ಕೂಗಿದರು.
ಅಕ್ರಮ ಮರಳುಗಾರಿಕೆಯಿಂದ ಇಲ್ಲಿನ ನಂದಾವರ ಹನುಮಾನ್ ದೇವಸ್ಥಾನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆ ದುರಸ್ತಿ ಅಥವಾ ಡಾಂಬರೀಕರಣಕ್ಕೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಭೇಟಿ:
ಇದೇ ವೇಳೆ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ ನೇತೃತ್ವದ ಅಧಿಕಾರಿಗಳು ಧಾವಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಗ್ರಾ.ಪಂ.ಸದಸ್ಯರಾದ ಸುಮತಿ ಎಸ್., ಯಮುನಾ, ಮಾಜಿ ಸದಸ್ಯ ಸಂದೀಪ್, ಪ್ರಮುಖರಾದ ತಾಜಿನ್ ಮತ್ತಿತರರು ಪ್ರತಿಬಟನೆಯಲ್ಲಿ ಪಾಲ್ಗೊಂಡರು.
ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿ ನಂದಕುಮಾರ್, ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ಬಿಗಿ ಬಮದೋಬಸ್ತು ಏರ್ಪಡಿಸಿದ್ದರು.
