ಬಂಟ್ವಾಳ: ಸಮಾನತೆ-ಸ್ವಾಭಿಮಾನದ ಸಿದ್ದಾಂತಗಳನ್ನಿರಿಸಿಕೊಂಡು ಬಡವರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಸರ್ಕಾರದ ಕಾರ್ಯ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಶನಿವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಕ್ಕಿಪ್ಪಾಡಿ, ಚೆನ್ನೈತ್ತೋಡಿ ಮತ್ತು ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಭೇಟಿ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ,94 ಸಿ ಹಕ್ಕುಪತ್ರ ವಿತರಣೆ, ಸವಲತ್ತು ವಿತರಣೆ ಹಾಗೂ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು.


ಸರ್ಕಾರದ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ತಮಾಷೆ ಮಾಡುವವರು ಇದ್ದಾರೆ, ಆದರೆ ಕೆಲ ದಶಕದ ಹಿಂದೆ ಇದ್ದ ಅಸಮಾನತೆಯ ಬದುಕು ಹಾಗೂ ಪರಾವಲಂಬಿ ಜೀವನ ಶೈಲಿ ಬದಲಾಗಲು ಭೂ ಸುಧಾರಣೆಯಂತಹ ಸರ್ಕಾರದ ಯೋಜನೆಗಳೇ ಕಾರಣ ಎಂಬುದನ್ನು ಮರೆಯಬಾರದು ಎಂದರು. 94 ಸಿ ಮನೆ ಅಡಿ ಹಕ್ಕು ಪತ್ರ ವಿತರಣೆ ರಾಜ್ಯದಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿದ್ದು, ಇದರ ಪರಿಶೀಲನೆ ಸಂದರ್ಭ ಗೋಮಾಳ, ಅರಣ್ಯ ಜಮೀನಿನ ತಾಂತ್ರಿಕ ತೊಂದರೆಗಳು ಎದುರಾಗಿದ್ದು, ಇವುಗಳ ಬಗೆಹರಿಕೆ ಕುರಿತಾಗಿ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು. ಚೆನ್ನೈತ್ತೋಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 27 ಲಕ್ಷ ರೂ ವೆಚ್ಚದಲ್ಲಿ ನೂತನ ಪಶು ಆಸ್ಪತ್ರೆ ಮಂಜೂರಾಗಿದ್ದು, ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಅಲ್ಲದೆ ಅಜ್ಜಿಬೆಟ್ಟು ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆಗೊಳಿಸಲಾಗಿದ್ದು ಆ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದವರು ಹೇಳಿದರು.
ನೂರಾರು ಮಂದಿಗೆ ಸವಲತ್ತು ವಿತರಣೆ
ದಿನವಿಡೀ ನಡೆದ ಗ್ರಾಮಭೇಟಿಯಲ್ಲಿ ಮೂರು ಗ್ರಾಮಪಂಚಾಯತ್ ವ್ಯಾಪ್ತಿಯ 35 ಮಂದಿಗೆ 94ಸಿ ಹಕ್ಕುಪತ್ರ, 10 ಮಂದಿಗೆ ಸಂಧ್ಯಾ ಸುರಕ್ಷಾ, 3ವಿಕಲಚೇತನರಿಗೆ ಅಂಗವಿಕಲವೇತನ, 8 ಗಾಲಿ ಖುರ್ಚಿ , 2 ಗೂಡಂಗಡಿ, 104 ಬಿಪಿಎಲ್ ಕಾರ್ಡ್ ದಾರರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಸಹಿತ ಗ್ಯಾಸ್ ಸ್ಟವ್ ಗಳನ್ನು ವಿತರಿಸಲಾಯಿತು.
ಅಭಿವೃದ್ದಿ ಕಾಮಗಾರಿಗಳು..
ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುರದಮೇಲು ಬಸ್ತಂಗುದಾಣ ಉದ್ಘಾಟನೆ, 15 ಲಕ್ಷ ರೂ ವೆಚ್ಚದ ಕರಂದಬೆಟ್ಟು.ಚೆನ್ನೈತ್ತೋಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, 35 ಲಕ್ಷ ವೆಚ್ಚದ ಅಂದ್ರಳಿಕೆ ಪರಿಶಿಷ್ಟ ಕಾಲೊನಿ ರಸ್ತೆ ಕಾಂಕ್ರಿಟೀಕರಣ, 5ಲಕ್ಷದ ಪಿಲಿಮೊಗರು ಗ್ರಾಮದ ಜತ್ತನಕೆರೆ ಹೊಗೆದಡ್ಡ ರಸ್ತೆ ಕಾಂಕ್ರಿಟೀಕರಣ, ವಾಮದ ಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣ ವಿಸ್ತರಣೆ ಮತ್ತು ಬಾಸ್ಕೆಟ್ ಬಾಲ್ ಅಂಗಣ ನಿರ್ಮಾಣಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪಿಲಿಮೊಗರು ಪಂಜೊಟ್ಟುವಿನಲ್ಲಿ ಕಾಲುಬಾಯಿರೋಗ ಲಸಿಕೆ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.
ಬಂಟ್ವಾಳ ಪ್ರಭಾರ ತಹಶೀಲ್ದಾರ್ ಮಹಮ್ಮದ್ ಇಸಾಖ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ, ಅಕ್ರಮಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉಪತಹಶೀಲ್ದಾರ್ ಸಾಧು, ತಾ.ಪಂ.ಸದಸ್ಯರಾದ ರಮೇಶ್ ಕುದ್ಮೇರು, ರೇವತಿ ಆರ್.ಪೂಜಾರಿ, ಕುಕ್ಕಿಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ. ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ಹರೀಶ್, ಉಪಾಧ್ಯಕ್ಷ ಆನಂದ ಆಚಾರ್ಯ, ಮಾಜಿ ಅಧ್ಯಕ್ಷರುಗಳಾದ ಯುವರಾಜ ಆಳ್ವ, ನವೀನ್ಚಂದ್ರ ಶೆಟ್ಟಿ,ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷೆ ಜಲಜ, ಮಾಜಿ ಅಧ್ಯಕ್ಷರುಗಳಾದ ಶಿವಾನಂದ ರೈ, ಪ್ರಭಾಕರ ಪ್ರಭು, ಮಾಜಿ ಉಪಾಧ್ಯಕ್ಷ ದೇವಪ್ಪ ಕರ್ಕೇರ, ಉಸ್ಮಾನ್ ಕರೋಪಾಡಿ, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ , ಇಂಜಿನಿಯರ್ ಜಗದೀಶ್ ನಿಂಬಾಳ್ಕರ್ , ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಪದ್ಮನಾಭ ಸಾಲ್ಯಾನ್, ಧರ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು.
