ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ಫರ್ಲ ಎಂಬಲ್ಲಿ ನೀರು ತುಂಬಿಸುತ್ತಿದ್ದ ಟ್ಯಾಂಕರ್ವೊಂದು ನೇತ್ರಾವತಿ ನದಿಗೆ ಬಿದ್ದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಘಟನೆಯಿಂದಾಗಿ ತಡೆ ಗೋಡೆ ಭಾಗಶಃ ಹಾನಿಗೊಂಡಿದೆ. ಎಎಂಆರ್ ಕಿರು ವಿದ್ಯುತ್ ಉತ್ಪಾದನಾ ಘಟಕಕ್ಕೆ ಸಂಬಂಧಿಸಿ ಫರ್ಲ ಬಳಿ ನಡೆಸಲಾಗುತ್ತಿರುವ ರಸ್ತೆ ಕಾಮಗಾರಿಗೆ ನೀರು ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ನದಿಗೆ ಮಗುಚಿ ಬಿದ್ದಿದೆ. ಫರ್ಲ ಬದ್ರಿಯ ಜುಮಾ ಮಸೀದಿಯ ಬಳಿ ನಿರ್ಮಿಸಲಾದ ರಸ್ತೆಗೆ ರಚಿಸಲಾದ ತಡೆಗೋಡೆ ಭಾಗಶಃ ಹಾನಿಗೊಂಡಿರುವುದಾಗಿ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಘಟನೆಯಿಂದ ಉಂಟಾದ ನಷ್ಟ ಪ್ರಮಾಣವನ್ನು ಅಂದಾಜು ಮಾಡಲಾಗಿಲ್ಲ ಎಂದು ಎಎಂಆರ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಗೂ ಅಲ್ಪಸ್ವಲ್ಪ ಹಾನಿ ಉಂಟಾಗಿದೆ. ಸಂಜೆ ತನಕವೂ ಟ್ಯಾಂಕರ್ ಮೇಲೆತ್ತದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತೊಂದರೆ ಗೀಡಾದರು.

