ಬಂಟ್ವಾಳ : ದುಬೈ ಶ್ರೀ ಶನೈಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ಮೂರನೇ ವರ್ಷದ ಶ್ರೀ ಶನಿ ಪೂಜೆ ಮತ್ತು ಶ್ರೀ ಶನೀಶ್ವರ ಯಕ್ಷಗಾನ ತಾಳಮದ್ದಳೆಯು ದುಬೈ ಜೆಎಸ್ಎಸ್ ಶಾಲಾ ಅಡಿಟೋರಿಯಂನಲ್ಲಿ ಎ 10 ರಂದು ನಡೆಯಲಿದೆ ಎಂದು ಸಮಿತಿ ಸಂಚಾಲಕರಲ್ಲೊಬ್ಬರಾದ ವಿಠಲ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ ಪಕ್ಷಿಕೆರೆ ಶ್ರೀ ಶನೈಶ್ವರ ಭಕ್ತವೃಂದ ಯಕ್ಷಗಾನ ತಾಳಮದ್ದಳೆ ನಡೆಸಿಕೊಡಲಿದೆ. ದ.ಕ. ಜಿಲ್ಲೆಯ ಪ್ರಸಿದ್ದ ಯಕ್ಷಗಾನ ಕಲಾವಿದರಾದ ಆನಂದ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಕದ್ರಿ ನವನೀತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್, ಪ್ರಸನ್ನ ಶೆಟ್ಟಿ ಅವರನ್ನೊಳಗೊಂಡ ತಂಡದ ಒಟ್ಟುಗೂಡುವಿಕೆಯಲ್ಲಿ ತಾಳಮದ್ದಲೆ ನಡೆಯಲಿದೆ. ಮುಂಬೈ ಅರ್ಚಕ ಪ್ರವೀಣ್ ಭಟ್ ಶ್ರೀ ಶನಿ ಪೂಜೆ ನಡೆಸಿಕೊಡುವರು. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಹೊಸ್ಮಾರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಆಶಿರ್ವಚನಗೈಯುವರು ಎಂದರು.
ದುಬೈಯಲ್ಲಿ ನೆಲೆಸಿರುವ ಬಂಟ್ವಾಳ ತಾಲೂಕಿನ ತುಂಬೆ ನಿವಾಸಿ ಸುಧಾಕರ್ ನೇತೃತ್ವದ ಜಿಲ್ಲೆಯ ಕೆಲ ವ್ಯಕ್ತಿಗಳನ್ನೊಳಗೊಂಡ ತಂಡ ಕಳೆದ ಮೂರು ವರ್ಷಗಳಿಂದ ಇಂತಹದ್ದೊಂದು ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವುದರ ಜೊತೆಗೆ ಹಲವು ಜನಪರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ ಎಂದ ವಿಠಲ ಶೆಟ್ಟಿ ದ.ಕ. ಹಾಗೂ ಉಡುಪಿ ಜಿಲ್ಲೆಯ ನೂರಾರು ಮಂದಿ ಉದ್ಯೋಗ ನಿಮಿತ್ತ ದುಬೈಯಲ್ಲಿ ನೆಲೆಸಿದ್ದು ಬಹುತೇಕ ಮಂದಿ ಕುಟುಂಬ ಸಮೇತರಾಗಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಬಂಟ್ವಾಳ ನಿವಾಸಿಗಳಾದ ಗಿಲ್ಬರ್ಟ್ ಡಿ’ಸೋಜ ಹಾಗೂ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.

