ನವದೆಹಲಿ: ಅಭಿಮಾನಿಗಳು ತಮ್ಮ ಮಂದಿರ ನಿರ್ಮಿಸಿದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ ನಂತರ ‘ಮೋದಿ ಮಂದಿರ’ದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಗುಜರಾತ್ನ ರಾಜ್ಕೋಟ್ ಸಮೀಪದ ಕೊಟಾರಿಯಾ ಗ್ರಾಮದಲ್ಲಿ ತಮ್ಮ ಅಭಿಮಾನಿಗಳು ಮಂದಿರ ನಿರ್ಮಿಸಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರಧಾನಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಈ ರೀತಿ ದೇವಸ್ಥಾನ ಕಟ್ಟುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು. ನಿಮಗೆ ಅಷ್ಟೊಂದು ಸಮಯ ಮತ್ತು ಹಣ ಇದ್ದರೆ, ಅದನ್ನು ಸ್ಪಚ್ಛ ಭಾರತ ಅಭಿಯಾನಕ್ಕೆ ಬಳಸಿ ಎಂದು ಟ್ವೀಟ್ ಮಾಡಿದ್ದರು.
ಮೋದಿ ಪ್ರತಿಕ್ರಿಯೆಯ ಬಳಿಕ ‘ಮೋದಿ ಮಂದಿರ’ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹದ ಉಸ್ತುವಾರಿ ವಹಿಸಿಕೊಂಡಿದ್ದ ಮಾಜಿ ಮಹಾನಗರ ಪಾಲಿಕೆ ಸದಸ್ಯ ರಮೇಶ್ ಉಂಧಡ್ ಅವರು, ‘ಮೋದಿ ಮಂದಿರ’ ಉದ್ಘಾಟನೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಮತ್ತು ಅವರ ಬದಲು ‘ಭಾರತ್ ಮಾತೆ’ ದೇವಸ್ಥಾನ ನಿರ್ಮಿಸುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ನಮ್ಮ ಹೃದಯದಲ್ಲಿದ್ದಾರೆ. ಅವರು ಹೇಳಿದಂತೆ ನಾವು ಸ್ಪಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗುತ್ತೇವೆ ಎಂದು ರಮೇಶ್ ಹೇಳಿದ್ದಾರೆ.
