ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಾಣಿಜ್ಯ ಸಂಘದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ” ವಿಸ್ತಾರ 2ಕೆ26 ಕಾಮರ್ಸ್ ಫೆಸ್ಟ್ ಕಾರ್ಯಕ್ರಮ ನಡೆಸಲಾಯಿತು. ಅತಿಥಿ ಅಭ್ಯಾಗತರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳು ತಯಾರಿಸಿದ ಎಟಿಎಂ ಮಾದರಿಯ ಮೂಲಕ ಹಣವನ್ನು ಡ್ರಾ ಮಾಡುವ ಮೂಲಕ ಫೆಸ್ಟ್ ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರು, ಮಾರ್ಗದರ್ಶಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, “ವಿಸ್ತಾರ 2ಕೆ26” ನಿಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ಸಂಶೋಧನೆಗೆ ದಾರಿದೀಪವಾಗಬೇಕು, ಅದೇರೀತಿ ಹೊಸ ಹೊಸ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುವುದು ,ವಾಣಿಜ್ಯ ಜ್ಞಾನ, ಸೃಜನಶೀಲತೆ, ವ್ಯವಹಾರಿಕ ಕೌಶಲ್ಯ ಹಾಗೂ ಹೊಸ ಚಿಂತನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಫೆಸ್ಟ್ ಜೀವನಕ್ಕೆ ದಾರಿದೀಪವಾಗಲಿ ಎಂದರು .

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀರಾಮ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರು ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಇದರ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಚೇತನ್ ರಾಜ್ ಮಾತನಾಡಿ, ಶ್ರೀರಾಮ ವಿದ್ಯಾ ಕೇಂದ್ರವು ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡರು.
ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ಕಲ್ಲಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ,ಗಾಯಕ ಸಂತೋಷ್ ಬೇಂಕ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಫೆಸ್ಟ್ ನಲ್ಲಿ ೧೦ ವಿದ್ಯಾ ಸಂಸ್ಥೆಗಳಿಂದ ಒಟ್ಟು ೧೧೦ ವಿದ್ಯಾರ್ಥಿಗಳು ಹಾಗೂ ೧೧ ಶಿಕ್ಷಕರು ಭಾಗವಹಿಸಿದ್ದರು.
ಶ್ರೀರಾಮ ಹೈಸ್ಕೂಲ್ ಮುಖ್ಯ ಗುರುಗಳಾದ ಗೋಪಾಲ್ , ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ, ಪ್ರಾಂಶುಪಾಲರಾದ ವಸಂತ್ ಬಲ್ಲಾಳ್, ಮಾತೃಭಾರತಿಯ ಉಪಾಧ್ಯಕ್ಷರಾದ ಶ್ವೇತಾ ಉಪಸ್ಥಿತರಿದ್ದರು.. ಉಪನ್ಯಾಸಕರಾದ ಅಶೋಕ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
