ಗುರುಪುರ : ರಾಜ್ಯದ ಬಹುತೇಕ ಎಲ್ಲ ಕಡಿದಾದ ಬೆಟ್ಟ-ಗುಡ್ಡ ಏರಿ ದಾಖಲೆ ಮಾಡಿರುವ ಚಾರಣಪ್ರಿಯ, ಹವ್ಯಾಸಿ ಸೈಕಲ್ ಸವಾರ ವಾಮಂಜೂರು ಕೆಲರೈಕೋಡಿಯ ಪುನಿತ್ ಕುಮಾರ್(೨೬) ಈ ಬಾರಿ ಕಾಶ್ಮೀರದ ಲಡಕ್ನಲ್ಲಿ ನಡೆದ ೪೨ ಕಿಮೀ ಉದ್ದದ ವಿಶ್ವದ ಅತಿ ಉದ್ದ ಹಾಗೂ ಕಠಿಣಾತಿಕಠಿಣ ಎನ್ನಲಾದ `ಲಡಕ್ ಮ್ಯಾರಾಥನ್’ನಲ್ಲಿ ಪಾಲ್ಗೊಂಡು ಕಂಚಿನ ಪದಕದೊಂದಿಗೆ ಮಂಗಳೂರಿಗೆ ಕೀರ್ತಿ ತಂದಿದ್ದಾರೆ.

ಕೊಡಚಾದ್ರಿ, ಕಳಸ, ಕುಮಾರಪರ್ವತ ಹಾಗೂ ರಾಜ್ಯದ ಇತರ ಬಹುತೇಕ ಎಲ್ಲ ಅತಿ ಎತ್ತರ ಹಾಗೂ ಕಠಿಣಾತಿಕಠಿಣ ಗುಡ-ಪರ್ವತಗಳಲ್ಲಿ ಯಶಸ್ವಿ ಚಾರಣ ನಡೆಸಿರುವ ಹೆಗ್ಗಳಿಕೆ ಪುನಿತ್ ಕೆಲರೈಕೋಡಿಗೆ ಸಲ್ಲುತ್ತದೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡಿದ ಬಳಿಕ ಬೆಂಗಳೂರಿನಲ್ಲಿ ಸೂಪರ್ ಮಾರುಕಟ್ಟೆ ಹೊಂದಿರುವ ಪುನಿತ್, ವರ್ಷಕ್ಕೆ ೨ ಬಾರಿ ದೇಶದ ಪ್ರಮುಖ ಸ್ಥಳಗಳಿಗೆ ಸೈಕಲ್ ಯಾತ್ರೆ ಕೈಗೊಳ್ಳತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ `ಪರಿಸರ ಉಳಿಸಿ, ಅರಣ್ಯ ಬೆಳೆಸಿ’ ಎಂಬ ಶೀರ್ಷಿಕೆಯಡಿ ಮಂಗಳೂರಿನಿಂದ ಕೇದಾರನಾಥಕ್ಕೆ(ಕುಡ್ಲ ಟು ಕೇದಾರನಾಥ್) ೩೦೦೦ ಕಿಮೀ ಸೈಕ್ಲಿಂಗ್ ಕೈಗೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿಗೆ ಇವರು ಬೆಂಗಳೂರಿನಿಂದ ಮಂಗಳೂರಿಗೆ ಸೈಕ್ಲಿಂಗ್ ನಡೆಸಿ, ಮತ ಚಲಾಯಿಸಿ ಮರಳಿದ್ದರು.
ಬೆಂಗಳೂರಿನಿಂದ ದಿಲ್ಲಿ ಮೂಲಕ ಕಾಶ್ಮೀರದ ಲೇಹ್ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಪುನೀತ್, ಲಡಕ್ಗೆ ರಸ್ತೆ ಮೂಲಕ ಸಾಗಿದ್ದಾರೆ. ೧೨ನೇ ವರ್ಷದ ಲಡಕ್ ಮ್ಯಾರಾಥನ್ನಲ್ಲಿ ದೇಶ-ವಿದೇಶಗಳ ೬೬೦೦ ಮಂದಿ ಓಟಗಾರರು ಪಾಲ್ಗೊಂಡಿದ್ದು, ವಿಶ್ವದಲ್ಲೇ ಅತಿ ಬೃಹತ್ ಮ್ಯಾರಾಥನ್ ಇದಾಗಿದೆ
