ಕೈಕಂಬ: ನಂತೂರು ಜಂಕ್ಷನ್ನಲ್ಲಿ ನಿಶ್ಮಿತಾ ಬಸ್ಗೆ ಮೀನಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಯುವಕರಿಬ್ಬರ ಪೈಕಿ ಒಬ್ಬಾತ ಗುರುಪುರ ಸಮೀಪದ ಬೊಳ್ಳೂರು-ಕಿನ್ನಿಮಜಲು ನಿವಾಸಿ ಗಣೇಶ್(27) ಎಂಬವನಾಗಿದ್ದು, ಈತ ಬಹುಮುಖ ಪ್ರತಿಭೆಯ ಯುವಕ ಎಂದು ಆತನ ಆತ್ಮೀಯ ವಲಯದಿಂದ ಅಭಿಪ್ರಾಯ ಕೇಳಿಬಂದಿದೆ. ಬೊಳ್ಳೂರಿನ ಗುರುವ ಮುಖಾರಿ ಎಂಬವರ ಐದು ಮಕ್ಕಳ ಪೈಕಿ ಕೊನೆಯ ಮಗನಾಗಿದ್ದು, ನಗುಮೊದ ಈತ ಎಲ್ಲರಿಗೂ ಪರಿಚಿತ ಯುವಕನಾಗಿದ್ದ. ಉತ್ತಮ ಕ್ರಿಕೆಟ್ ಪಟುವಾಗಿದ್ದ ಈತ ತನ್ನ ಟೀಂನೊಂದಿಗೆ ಹೊರಟರೆ ಈತನ ಕೌಶಲ್ಯದಿಂದ ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಸಫಲನಾಗಿರುತ್ತಿದ್ದ.
. 
ಮೃತ ಗಣೇಶ್ ಗುರುಪುರ ಅಲೈಗುಡ್ಡೆಯಲ್ಲಿರುವ ಪ್ರಖ್ಯಾತ ವೈದ್ಯರಾದ ದಿವಂಗತ ಡಾ. ಪಿ.ಎಸ್.ರಾವ್ ಅವರ ಕಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ವರ್ಷ ಡಾ.ಪಿ.ಎಸ್. ರಾವ್ ವಿಧಿವಶರಾದ ಕಾರಣ ಅಲ್ಲಿಂದ ಕೆಲಸ ಬಿಟ್ಟು ಮಂಗಳೂರಿನ ಟೈಲ್ಸ್ ಕಂಪೆನಿಗೆ ಕೆಲಸಕ್ಕೆ ಸೇರಿದ್ದ. ಪ್ರತಿನಿತ್ಯ ನಿಶ್ಮಿತಾ ಬಸ್ನಲ್ಲಿ ತೆರಳುತ್ತಿದ್ದ ಈತ ಮಂಗಳವಾರ ಬೆಳಿಗ್ಗೆ ಬಸ್ಗೆ ಮೀನಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಯಾರಾದರೂ ಕಷ್ಟದಲ್ಲಿ ಸಿಲುಕಿದರೆ ತಕ್ಷಣ ಸಹಾಯಕ್ಕೆ ಧಾವಿಸುತ್ತಿದ್ದ ಎಂದು ಆತನ ಆತ್ಮೀಯ ಗೆಳೆಯರು ಕಂಬನಿ ಮಿಡಿಯುತ್ತಿದ್ದಾರೆ.
ಡಾ.ಪಿ.ಎಸ್. ರಾವ್ ಅವರ ಬಳಿ ಇದ್ದಾಗಲೂ ತನ್ನ ಕ್ಲಿನಿಕ್ಗೆ ಬಂದ ರೋಗಿಗಳ ಗಾಯಕ್ಕೆ ಯಾವುದೇ ರೇಜಿಗೆ ಇಲ್ಲದೆ ಶುಶ್ರೂಶೆ ನೀಡುತ್ತಿದ್ದರಿಂದ ಅನೇಕ ಮಂದಿಗೆ ಗಣೇಶ್ ಪ್ರೀತಿಪಾತ್ರ ಹುಡುಗನಾಗಿದ್ದ. ಈತನ ಸೇವಾಮನೋಭಾವನೆಯನ್ನು ಕಂಡು ವೈದ್ಯರೂ ಸಹ ಅಷ್ಟೇ ಮೆಚ್ಚಿಕೊಂಡಿದ್ದರು. ಆದರೆ ಇತ್ತೀಚೆಗೆ ವೈದ್ಯರು ಮೃತರಾದ ಬಳಿಕ ತೀವ್ರವಾಗಿ ನೊಂದುಕೊಂಡಿದ್ದ. ಈತನ ಸಾವಿನಿಂದ ಮನೆಯವರಷ್ಟೇ ಅಲ್ಲದೆ, ಇಡೀ ಊರಿಗೆ ಊರೇ ಕಂಬನಿ ಮಿಡಿಯುತ್ತಿದೆ
