ವಿದ್ಯಾಗಿರಿ: ಆಳ್ವಾಸ್ ನುಡಿಸಿರಿ 2014ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕನ್ನಡ ಸಾಹಿತ್ಯದ ರುಚಿಯನ್ನು ಕಲಾರಸಿಕರಿಗೆ ಉಣ ಬಡಿಸಲು ಸಜ್ಜಾಗಿದೆ. 3 ದಿನಗಳ ಕಾಲ ನಡೆಯುತ್ತಿರುವ ನುಡಿಸಿರಿ ಸಾಹಿತಿ, ಕವಿ ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎಂದಿನಂತೆ ಪ್ರಧಾನ ಸಾಹಿತ್ಯ ಗೋಷ್ಠಿ, ವಿಶೇಷೋಪಾನ್ಯಾಸಗಳು, ಶತನಾಮದ, ನಮನ, ಸಂಸ್ಮರಣೆ, ಕವಿಸಮಯ ಕವಿನಮನ, ಸಾಂಸ್ಕೃತಿಕ ವೈಭವಗಳಿಗೆ ಎಂದಿನಂತೆಯೇ ಆದ್ಯತೆ ನೀಡಲಾಗಿದೆ. ಇದರೊಂದಿಗೆ ವಿವಿಧ ಪ್ರದರ್ಶನ, ಜಾನಪದ ಕಲೆಗಳು, ಭಾಷಾ ವೈವಿಧ್ಯ ಈ ಬಾರಿಯ ನುಡಿಸಿರಿಯ ಮುಖ್ಯ ಆಕರ್ಷಣೆಯಾಗಿದೆ.
ಏನೇನು ವಿಶೇಷತೆ:
3 ಸಾವಿರಕ್ಕೂ ಅಧಿಕ ಕಲಾವಿದರು, 150ಕ್ಕೂ ಹೆಚ್ಚಿನ ಕಲಾ ತಂಡಗಳು ಭಾಗವಹಿಸುತ್ತಿದ್ದು, ಇಡೀ ಆವರಣ ಕಣ್ಣಿಗೆ ಮುದ ನೀಡುವಂತೆ ಅಲಂಕಾರಗೊಳಿಸಲಾಗಿದೆ. ಫಲ ಪುಷ್ಪ ಪ್ರದರ್ಶನ, ಪ್ರಾದೇಶಿಕ ಭಾಷಾ ಜನರ ಸಾಮರಸ್ಯದ ಮೇಳವನ್ನು ಈ ಬಾರಿ ಕಾಣಬಹುದು.
ಸುಮಾರು 3 ಲಕ್ಷಕ್ಕೂ ಮಿಕ್ಕಿ ಜನರು ಸಮ್ಮೇಳನಕ್ಕೆ ಬರುತ್ತಿದ್ದು ಹಣ್ಣು ಹಂಪಲು , ತರಕಾರಿಗಳಿಂದ ಬೇರೆ ಬೇರೆ ರೀತಿಯ ಕಲಾಕೃತಿಗಳನ್ನು ಮಾಡಿ ಅಲಂಕಾರ ಮಾಡಲಾಗಿದೆ. ಎಂದಿನಂತೆ ಈ ಬರಿಯೂ ಶುಚಿತ್ವಕ್ಕೆ ಒತ್ತು ನೀಡಲಾಗಿದ್ದು 9 ಕಡೆ 45 ಕೌಂಟರ್ಗಳಲ್ಲಿ ಒಂದು ಗಂಟೆಯಲ್ಲಿ 10 ಸಾವಿರ ಜನ ನೂಕು ನುಗ್ಗಲಿಲ್ಲದೆ ಊಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಒಟ್ಟು 6 ವೇದಿಕೆಗಳಿದ್ದು ಎಲ್ಲ ವೇದಿಕೆಗಳಲ್ಲೂ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಭಾಷಾ ಸಮ್ಮೇಳನಗಳು ಈ ವೇದಿಕೆಯಲ್ಲಿ ನಡೆಯಲಿದೆ. ಸಂಜೆ ಹೊತ್ತಿಗೆ ನಡೆಯಲಿರುವ ಬ್ಯಾರಿ, ಕೊಂಕಣಿ, ತುಳು ಭಾಷಾ ಸಮ್ಮೇಳನಗಳಿಗೆ 3 ರಿಂದ 4 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಈಗಾಗಲೇ ಸಾವಿರಕ್ಕೂ ಮಿಕ್ಕಿ ಜನ ಆಗಮಿಸಿದ್ದು 3 ರಾಜ್ಯಗಳಿಂದ ವಿದ್ಯಾಥರ್ಿಗಳು ಆಗಮಿಸುತ್ತಿದ್ದಾರೆ.
ಈ ಬಾರಿಯೂ ಸಮಯ ಪ್ರಜ್ಞೆಗೆ ಮಹತ್ವವನ್ನು ನೀಡಲಾಗಿದ್ದು ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ನಡೆಯಲಿವೆ. 50 ಜನಪದ ತಂಡದೊಂದಿಗೆ ಸರಿಯಾಗಿ 8.45 ರಿಂದ 9.30ರ ವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಇಲ್ಲಿಯವರೆಗೆ ರಾಜ್ಯದ ವಿವಿಧ ಭಾಗಗಳಿಂದ 5000ಕ್ಕೂ ಅಧಿಕ ಕನ್ನಡಭಿಮಾನಿಗಳು ವಿದ್ಯಾಗಿರಿಗೆ ಆಗಮಿಸಿದ್ದಾರೆ.
ಪ್ರದರ್ಶನ:
ಧಾರವಾಡ, ಗದಗ, ಹುಬ್ಬಳ್ಳಿಯ ಜ್ಞಾನ ಸಿಂಧು ಅಂಧ ಮಕ್ಕಳ ತಂಡದಿಂದ ಮಲ್ಲಕಂಭ ಪ್ರದರ್ಶನ ನಡೆಯಲಿದೆ. ಹಣ್ಣು ಹಂಪಲು ಮತ್ತು ತರಾಕಾರಿಗಳಿಂದ ಕಲಾಕೃತಿಗಳ ಪ್ರದರ್ಶನ, ಕೃಷಿ ಸಂಬಂಧಿತ ವಿಶೇಷ ಪ್ರದರ್ಶನ, ಅದರಲ್ಲೂ ಮಣಿಪುರದ 21/1 ಅಡಿಯ ಬಾಳೆಗೊನೆ ಈ ಬಾರಿಯ ವಿಶೇಷ. ಇಷ್ಟಲ್ಲದೆ ಸುಡುಗಾಡು ಸಿದ್ಧರು, ಹಕ್ಕಿ ಪಿಕ್ಕಿ ತಂಡ, ಜಾನಪದ ತಂಡಗಳ ಕಲಾ ಪ್ರದರ್ಶನ, ತುಳು ಕೊಂಕಣಿ, ಬ್ಯಾರಿ ಜನರ ಸಾಂಪ್ರದಾಯಿಕ ತೊಡುಗೆಗಳು ಮತ್ತು ಸಾಮಪ್ರದಾಯಿಕ ತಿಂಡಿ, ತಿನಿಸುಗಳ ಪ್ರದರ್ಶನ ಮೇಳವೂ ಮುಖ್ಯ ಆಕರ್ಷಣೆಯಾಗಿದೆ.
183 ಪುಸ್ತಕ ಮಳಿಗೆಗಳು ಆಕರ್ಷಣೆಯಾಗಿದೆ. ಎಲ್ಲಾ ಪ್ರಾಯದ, ವರ್ಗದ, ಸ್ತರದ ಜನರಿಗೆ ಪ್ರಿಯವಗುವ ಎಲ್ಲ ರೀತಿಯ ಕಾರ್ಯಕ್ರಮಗಳು ನುಡಿಸಿರಿಯ ವೇದಿಕೆಗಳಲ್ಲಿ ನಡೆಯುತ್ತಿದ್ದು, 3 ಲಕ್ಷಕ್ಕೂ ಮಿಕ್ಕಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಮೋಹನ್ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



