ಹುಬ್ಬಳ್ಳಿ : ಕೆ.ಎಸ್.ಆರ್.ಪಿ. ಡಿ ಗ್ರೂಪ್ ನೌಕರನ ಅನುಮಾನಾಸ್ಪದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮಕ್ಕಳಿಂದಲೇ ತಂದೆಯ ಕೊಲೆ ನಡೆದಿರೋ ಅಂಶ ಬಹಿರಂಗಗೊಂಡಿದೆ. ಇಸ್ಮಾಯಿಲ್ ಸಾಬ್ ಕಿಲ್ಲೇದಾರ್ ಕೊಲೆಯಾದ ಕೆ.ಎಸ್.ಆರ್.ಪಿ. ನೌಕರನಾಗಿದ್ದಾನೆ. ಕೆಸಿಸಿ ಬ್ಯಾಂಕ್ ಕಾಲೋನಿಯ ನಿವಾಸಿಯಾಗಿದ್ದ ಇಸ್ಮಾಯಿಲ್, ಜೂನ್ 28 ರಂದು ಶವವಾಗಿ ಪತ್ತೆಯಾಗಿದ್ದ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಂದ ಸತ್ಯ ಬಯಲಾಗಿದೆ. ಹೆತ್ತ ಮಕ್ಕಳೇ ಪಾಪಿ ಕೃತ್ಯ ಎಸಗಿರೋದು ಬಹಿರಂಗಗೊಂಡಿದೆ.

ಸಾಂದರ್ಭಿಕ ಚಿತ್ರ

ವಿಶ್ರಾಂತ ಜೀವನ ಬದುಕಲು ಬಯಸಿದ್ದ ವ್ಯಕ್ತಿ ಕೊಲೆ

ಈ ವ್ಯಕ್ತಿಯ ಹೆಸರು ಇಸ್ಮಾಯಿಲ್ ಸಾಬ್ ಕಿಲ್ಲೇದಾರ್. ನವನಗರದ ಕೆಸಿಸಿ ಬ್ಯಾಂಕ್ ಕಾಲೋನಿಯ ನಿವಾಸಿಯಾಗಿದ್ದ. ಇಸ್ಮಾಯಿಲ್ ಸಾಬ್ ಕಳೆದ ಹಲವು ವರ್ಷಗಳಿಂದ ಕೆಎಸ್‌ಆರ್‌ಪಿ ಯಲ್ಲಿ ಡಿ ಗ್ರೂಪ್ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇನ್ನೇನು ನಾಲ್ಕೈದು ವರ್ಷಗಳಲ್ಲಿ‌ ನಿವೃತ್ತಿ ಹೊಂದಿ ವಿಶ್ರಾಂತಿ ಜೀವನ ಕಳೆಯಬಯಸಿದ್ದ. ಈಗ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾನು ಹೆತ್ತ ಮಕ್ಕಳಿಂದಲೇ ಕೊಲೆಗೀಡಾಗಿದ್ದಾನೆ.

ಹೌದು ಮೊದಲನೇ ಪತ್ನಿ ತೀರಿಹೋದ ಬಳಿಕ ಇಸ್ಮಾಯಿಲ್ ಸಾಬ್ ಎರಡನೇ ಮದುವೆಯಾಗಿದ್ದ. ಮೊದಲನೇ ಪತ್ನಿಯ ಇಬ್ಬರು ಮಕ್ಕಳು ಹಾಗೂ ಇಸ್ಮಾಯಿಲ್ ಸಾಬ್ ನ ಎರಡನೇ ಪತ್ನಿಗೆ ಕ್ಷುಲ್ಲಕ ಕಾರಣಗಳಿಂದ ಆಗಾಗ ಜಗಳ ನಡೆಯುತ್ತಲೇ ಇತ್ತು.

ಮಲತಾಯಿ ಮೇಲೆ ಸಿಟ್ಟು, ಬಲಿಯಾಗಿದ್ದು ತಂದೆ

ಕಳೆದ ಹಲವು ವರ್ಷಗಳಿಂದ ಮಲತಾಯಿ ತಮ್ಮನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆಕ್ರೋಶಗೊಂಡ ಪುತ್ರಿ ದಾವಲ್ ಮುನ್ನಿ ಹಾಗೂ ಪುತ್ರ ಫಕ್ರುಸಾಬ್ ತಂದೆಯೊಂದಿಗೂ ಆಗಾಗ ಜಗಳ ಆಡುತ್ತಿದ್ದರು. ಕೊನೆಗೆ ಆಸ್ತಿ ವಿಚಾರಕ್ಕಾಗಿ ಮಲತಾಯಿಯ ಮೇಲಿನ ಸಿಟ್ಟಿನಿಂದಾಗಿ ತಂದೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.‌

ಮೃತ ದೇಹ ಎಸೆದು ಎಸ್ಕೇಪ್

ಜೂನ್ 28 ರಂದು ರಾತ್ರಿ ಕೆಲಸದ ನೆಪ ಹೇಳಿ ಮನೆಯಿಂದ ತಂದೆಯನ್ನ ಆಟೋದಲ್ಲಿ ಕರೆದೊಯ್ದ ಪಾಪಿ ಮಕ್ಕಳು ಕತ್ತು ಹಿಸುಕಿ ಕೊಲೆ ಮಾಡಿ ಮೃತ ದೇಹವನ್ನ ನವನಗರದ ಕಾನೂನು ವಿವಿ ಬಳಿ ಎಸೆದು ಎಸ್ಕೇಪ್ ಆಗಿದ್ದಾರೆ. ಇನ್ನು ಇದಕ್ಕೆ ಪ್ರಮುಖ ರೂವಾರಿ ಇಸ್ಮಾಯಿಲ್ ಸಾಬ್ ನ ಮಗಳು ದಾವಲ್ ಮುನ್ನಿಯೇ ಆಗಿದ್ದು, ತನ್ನ ತಮ್ಮನಿಗೆ ಹಾಗೂ ಅವನ ಸ್ನೇಹಿತರಿಗೆ ಸುಪಾರಿ ನೀಡಿ ತಂದೆಯ ಕೊಲೆಗೆ ಕಾರಣವಾಗಿದ್ದಾಳೆ.

ತಾಯಿ ತೀರಿಹೋದ ಬಳಿಕ ತಂದೆ ಎರಡನೇ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಸಾಬ್ ನ ಮಕ್ಕಳಾದ ಫಕ್ರುಸಾಬ್ ಹಾಗೂ ದಾವಲ್ ಮುನ್ನಿ ತಂದೆಯೊಂದಿಗೆ ಆಗಾಗ ಜಗಳ ಮಾಡುತ್ತಲೇ ಇದ್ರಂತೆ.‌ ಇದರ ಜೊತೆಗೆ ಎರಡನೆಯ ಹೆಂಡತಿ ಈ ಇಬ್ಬರು ಮಕ್ಕಳ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ಲಂತೆ.

ಆಸ್ತಿ ವಿಚಾರವಾಗಿಯೂ ವಾಗ್ವಾದ

ಅಲ್ಲದೇ ಆಸ್ತಿ ವಿಚಾರವಾಗಿಯೂ ತಂದೆ ಹಾಗೂ ಮಕ್ಕಳಲ್ಲಿ ನಡೆಯುತ್ತಿದ್ದ ಕಲಹ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಕಳೆದ ಒಂದು ವರ್ಷದಿಂದ ತಂದೆಯ ಕೊಲೆಗೆ ಸ್ಕೆಚ್ ಹಾಕಿ ಕುಳಿತಿದ್ದ ಅಕ್ಕ ದಾವಲ್ ಮುನ್ನಿ ಹಾಗೂ ಫಕ್ರುಸಾಬ್ ಮೊನ್ನೆ ರಾತ್ರಿ ವೇಳೆ ಯಾವುದೋ ಕೆಲಸದ ನೆಪ‌ಹೇಳಿ ತಂದೆಯನ್ನ ಹೊರಗಡೆ ಕರೆದುಕೊಂಡು ಬಂದಿದ್ದಾರೆ.

By suddi9

Leave a Reply

Your email address will not be published. Required fields are marked *