ಜೈಪುರ: ಮಹಾತ್ಮ ಗಾಂಧಿ ಅವರ ಹತ್ಯೆಯಾದ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ನ್ನು ನಿಷೇಧಿಸಿದ್ದರು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ನಿಷೇಧಿಸಿದ್ದಾಗ ಆರ್ಎಸ್ಎಸ್ ಕ್ಷಮೆಯಾಚಿಸಿತ್ತು. ಜೊತೆಗೆ ತಾವು ಎಂದಿಗೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನಷ್ಟೇ ನಡೆಸುತ್ತೇವೆ ಎಂದು ಹೇಳಿತ್ತು. ಆದರೆ ಈಗ ಆರ್ಎಸ್ಎಸ್ನವರು ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆರ್ಎಸ್ಎಸ್ ಪಾತ್ರ ಏನು ಎಂದು ಪ್ರಶ್ನಿಸಿದ ಅವರು, ಮುಂದಿನ 15 ವರ್ಷಗಳಲ್ಲಿ ಅಖಂಡ ಭಾರತವನ್ನು ಮಾಡಲಾಗುವುದು ಎಂದು ಮೋಹನ್ ಭಾಗವತ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಈಗ ಅಖಂಡ ಭಾರತವಾಗಿದೆಯೇ? ಎಂದು ಕಿಡಿಕಾರಿದರು.

ಭಾರತ ಈಗಾಗಲೇ ಒಗ್ಗೂಡಿಲ್ಲ. ಅಖಂಡ ಭಾರತ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಕೊಡುಗೆ ಎಷ್ಟು ಎಂದು ತಿಳಿಸಿ ಎಂದರು. ಸಾಮಾಜಿಕ-ಸಾಂಸ್ಕೃತಿಕ ಕೆಲಸಗಳನ್ನು ಮಾಡಬೇಕಾದ ಆರ್ಎಸ್ಎಸ್ ಸಮಾಜದಲ್ಲಿ ಅಸ್ಪೃಶ್ಯತೆ, ಶ್ರೀಮಂತ ಮತ್ತು ಬಡವರ ವಿಭಜನೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆದರು.
