ಮೂಡುಬಿದಿರೆ: ಉಡುಪಿ ಶ್ರೀಕೃಷ್ಣ ಮಠದ ಪೂಜಾ ಪರ್ಯಯ ಪೀಠಾರೋಹಣ ಮಾಡಲಿರುವ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಶುಕ್ರವಾರ ಸಾಯಂಕಾಲ ಮೂಡುಬಿದಿರೆ ಕೊಆಪರೇಟಿವ್ ಬ್ಯಾಂಕ್ಗೆ ಬೇಟಿ ನೀಡಿದರು.
ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಫಲಪುಷ್ಪ ನೀಡಿ ಗೌರವಿಸಿದರು. ನಂತರ ಆಶೀರ್ವಚನ ನೀಡಿದ ಸ್ವಾಮೀಜಿ ಎಂಸಿಎಸ್ ಬ್ಯಾಂಕ್ ಶತಮಾನಗಳನ್ನು ಆಚರಿಸಿರುವುದು ಹೆಮ್ಮೆಯ ವಿಷಯ. ಸಹಕಾರಿ ಅನ್ನುವ ಶಬ್ದಕ್ಕೆ ಅನುಗುಣವಾಗಿ ನೀವೆಲ್ಲರೂ ಸಹಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದೀರಿ ಎಂದ ಅವರು ಬ್ಯಾಂಕ್ನ ಅಭಿವೃದ್ಧಿಗೆ ಕಾರಣಿಕರ್ತರಾದ ಮಾಜಿ ಅಧ್ಯಕ್ಷ ದಿವಂಗತ ಅಮರನಾಥ ಶೆಟ್ಟಿ ಅವರ ಸೇವೆಯನ್ನು ಅವರು ಉಲ್ಲೇಖಿಸಿದರು.
ಬ್ಯಾಂಕ್ನ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ತಂತ್ರಿ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಬ್ಯಾಂಕ್ನ ಉಪಾಧ್ಯಕ್ಷೆ ಪ್ರೇಮಾ ಸಾಲ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರಣೇಂದ್ರ ಕುಮಾರ್, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬಂದಿವರ್ಗದವರು ಉಪಸ್ಥಿತರಿದ್ದರು.
