ಮೂಡುಬಿದಿರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ‘ಕನ್ನಡಕ್ಕಾಗಿ ನಾವು-ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ತಾಲೂಕಿನ 5 ವಿದ್ಯಾಸಂಸ್ಥೆಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಕನ್ನಡನಾಡಿನ ಗೀತೆಗಳನ್ನು ಹಾಡಿದರು.
ಮೂಡುಬಿದಿರೆಯ ಎಕ್ಸಲೆಂಟ್ ಸಂಸ್ಥೆ, ಡಿ.ಜೆ ಕನ್ನಡ ಮಾಧ್ಯಮ ಶಾಲೆ, ಜೈನ ಪ್ರೌಢಶಾಲೆ, ಡಿ.ಜೆ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸ್ವಸ್ತಿಶ್ರೀ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಂದೇಶ ನೀಡಿ, ಬಹುಭಾಷೆಗಳ ಸಂಗಮವಾಗಿರುವ ನಮ್ಮ ರಾಜ್ಯದಲ್ಲಿ ನಾವು ನಮ್ಮ ನಾಡ ಭಾಷೆ ಕನ್ನಡವನ್ನು ವಿಶೇಷ ಪ್ರೀತಿಯಿಂದ ಬಳಸುತ್ತೇವೆ. ನಾವು ಕಲಿಯುತ್ತಿರುವ ಮಾಧ್ಯಮದ ಭಾಷೆಗಳು ಬೇರೆ ಇದ್ದರೂ ನಮ್ಮ ನಾಡ ಭಾಷೆಯ ಬಗ್ಗೆ ವಿಶೇಷ ಒಲವು ಹೊಂದಿರಬೇಕು. ಕನ್ನಡ ನಾಡ ಗೀತೆ, ನಾಡಿನ ಮಹತ್ವ ಸಾರುವ ಗೀತೆಗಳಲ್ಲಿ ವಿಶೇಷ ಅರ್ಥವಿದೆ ಎಂದರು.
ಮೂಡುಬಿದಿರೆ ತಹಸೀಲ್ದಾರ್ ಪುಟ್ಟರಾಜು, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ತಾಲೂಕು ಕಾರ್ಯನಿರ್ವಾಹಧಿಕಾರಿ ದಯಾವತಿ, ಪುರಸಭೆ ಸದಸ್ಯೆ ಶ್ವೇತಾ ಪ್ರವೀಣ್, ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು, ಗೀತಾ ಗಾಯನದ ತಾಲೂಕು ನೊಡೇಲ್ ಅಧಿಕಾರಿ ಶಿವಾನಂದ ಕಾಯ್ಕಿಣಿ ಉಪಸ್ಥಿತರಿದ್ದರು.

