ಬಿ.ಸಿ.ರೋಡ್ : ಮುಂದಿನ ದಿನಗಳಲ್ಲಿ ಯಕ್ಷಗಾನ ತಂಡಗಳು ಉಳಿಯಬೇಕಾದರೆ ಯಕ್ಷ ನಾಟ್ಯದ ತರಗತಿಗಳು ಅನಿವಾರ್ಯವಾಗಿರುತ್ತದೆ. ಯಕ್ಷನಾಟ್ಯ ತಂಡಗಳು ಆರಂಭವಾದರೂ ಅದನ್ನು ಮುಂದಿನ ದಿನಗಳಲ್ಲಿ ಉಳಿಸಿಬೆಳೆಸುವುದು ನಮ್ಮ ಕರ್ತವ್ಯ ಎಂದು ಹಿರಿಯ ಯಕ್ಷಗಾನ ಕಲಾವಿದ ಜಯರಾಮ್ ಆಚಾರಿ ತಿಳಿಸಿದರು.
ಅವರು ಆದಿತ್ಯವಾರ ಕೆಂಪುಗುಡ್ಡೆ ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಯಕ್ಷ ಪ್ರೇಮಿಲು ಬಂಟ್ವಾಳ ಇದರ ಆಶ್ರಯದಲ್ಲಿ ನಡೆದ ತೆಂಕುತಿಟ್ಟು ಯಕ್ಷಗಾನದ ನಾಟ್ಯ ತರಬೇತಿಯ ಉದ್ಘಾಟಿಸಿ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕತೆಗೆ ಪೂರಕವಾಗಿ ಯಕ್ಷಗಾನವು ಸೇವಾರೂಪವಾಗಿ ನಡೆಯುತ್ತಿದೆ. ನಾಟ್ಯ ತರಗತಿಗಳು ಪ್ರಾರಂಭವಾದಷ್ಟು ಯಕ್ಷಗಾನಕ್ಕೆ ಮೆರುಗು ಬರುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಯಕ್ಷ ನಾಟ್ಯ ಶಿಕ್ಷಕ ಸುನಿಲ್ ಪಲ್ಲಮಜಲು, ಅಮ್ಟಾಡಿ ಪಂಚಾಯತ್ ಉಪಾಧ್ಯಕ್ಷ ಸುನಿಲ್ ಕಾಯರ್ಮಾರ್, ಪಂಚಾಯತ್ ಸದಸ್ಯ ಯಶವಂತ ಶೆಟ್ಟಿ, ಪಂಚಾಯತ್ ಸದಸ್ಯೆ ನಳಿನಿ, ಕೆಂಪುಗುಡ್ಡೆ ವಿಶ್ವ ಹಿಂದೂ ಪರಿಷತ್ತ್ ಅಧ್ಯಕ್ಷ ದಿವಾಕರ ಕಿನ್ನಿಬೆಟ್ಟು, ಕಾಳಬೈರವ ಶಾಖೆ ಯೋಗೀಶ್ ಕೆಂಪುಗುಡ್ಡೆ, ತಂಡದ ಸಂಚಾಲಕ ವಸಂತ, ವರಕೋಡಿ ಮಕ್ಕಳ ಮೇಳ ಸಂಚಾಲಕ ಪ್ರವೀಣ್ ವರಕೋಡಿ ಉಪಸ್ಥಿತರಿದ್ದರು. ಲಕ್ಷ್ಮಣ್ ಗೌಡ ಅತಿಥಿಗಳನ್ನು ಸ್ವಾಗತಿಸಿದರು. ಸುರೇಶ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಮೋಹಿತ್ ಸಹಕರಿಸಿದರು.
೨೬ವೈಎ ಯಕ್ಷಗಾನ
