ಕೈಕಂಬ : ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಒಪ್ಪೊತ್ತಿನ ಕೂಳಿಗೂ ಪರದಾಟ ಸ್ಥಿತಿ ಎದುರಾಗಿದ್ದು, ಉಳ್ಳವರಲ್ಲಿ ಕೆಲವರು ಮಾನವೀಯತೆ ನೆಲೆಯಲ್ಲಿ ಹಸಿದವರ ಹೊಟ್ಟೆಗೆ ಹಿಟ್ಟು ಕೊಡುವುದುಂಟು. ಅಂತಹವರ ಸಾಲಿನಲ್ಲಿ ವಾಮಂಜೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮೋಹನದಾಸ್ ಬಂಗೇರ ಒಬ್ಬರು.
ಕೊರೊನಾ ಮಹಾಮಾರಿ ಬಾಧಿಸಿದ್ದ ಕಳೆದ ಬಾರಿಯೂ ಹಲವರಿಗೆ ಹಕ್ಕಿ ಸಹಿತ ದಿನಸಿ ಕಿಟ್ ವಿತರಿಸಿ ಆತ್ಮತೃಪ್ತಿ ಕಂಡುಕೊಂಡಿದ್ದ ಬಂಗೇರ ಈ ಬಾರಿ ವಾಮಂಜೂರು ಆಸುಪಾಸಿನ ಹಾಗೂ ಮಂಗಳೂರಿನ ೧೦೦ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಎಂದೂ ಪ್ರಚಾರ ಬಯಸದ ಇವರು, ಅನ್ಯ ಸಂದರ್ಭಗಳಲ್ಲೂ ನಿರ್ಗತಿಕರಿಗೆ ನೆರವಾಗುವ ಸಹೃದಯಿ. ಇವರ ಈ ಸೇವೆ ಎಲ್ಲೆಡೆ ಪ್ರಸಂಶೆಗೊಳಗಾಗಿದ್ದು, ಕಿಟ್ ಪಡೆದುಕೊಂಡ ಹಸಿದವರ ಹರ್ಷ ಹೇಳತೀರದು ಎಂದು ಬಂಗೇರರ ಒಡನಾಡಿಯೊಬ್ಬರು ಹೇಳಿದ್ದಾರೆ.

