ಮೂಡುಬಿದಿರೆ: ರಸ್ತೆ ಬದಿ ನಿಂತಿದ್ದ ಮಹಿಳೆಯೋರ್ವರಿಗೆ ಢಿಕ್ಕಿಯಾದರೂ ನಿಲ್ಲದೇ ಪರಾರಿಯಾಗಿದ್ದ ರಿಕ್ಷಾ ಸವಾರನ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನು ಪತ್ತೆ ಹಚ್ಚುವ ಮೂಲಕ ಮೂಡುಬಿದಿರೆ ಪೋಲೀಸರು ರಿಕ್ಷಾವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಮೇ 30ರಂದು ಜೈನಪೇಟೆಯ ಜೈನಮಠದ ತಿರುವಿನಲ್ಲಿ ಹೆದ್ದಾರಿ ಪಕ್ಕದಲ್ಲಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿಯಾಗಿ ಪರಾರಿಯಾಗಿತ್ತು. ಈ ವೇಳೆ ಮಳೆಯೂ ಸುರಿಯುತ್ತಿದ್ದು ತಲೆಗೆ ಗಂಭೀರ ಏಟಿನೊಂದಿಗೆ ಗಾಯಗೊಂಡಿದ್ದ ಮಹಿಳೆ ಕೆಲಕಾಲ ರಸ್ತೆಯಂಚಿನಲ್ಲೇ ಕುಸಿದು ಬಿದ್ದಿದ್ದರು.
ಅದಾಗಲೇ ತಮ್ಮ ಕಾರಿನಲ್ಲಿ ಸಾಗುತ್ತಿದ್ದ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಉಪಾಧ್ಯಕ್ಷ ಸಂಪತ್ ಪೂಜಾರಿ ನೆತ್ತೋಡಿ ಮಹಿಳೆಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಗೊಂಡವರನ್ನು ಸ್ಥಳೀಯ ಮಹಿಳೆ ಗುಲಾಬಿ ಎಂದು ಗುರುತಿಸಲಾಗಿದೆ. ಸಿಸಿ ಕ್ಯಾಮರಾದಲ್ಲಿ ಘಟನೆ ದಾಖಲಾಗಿದ್ದು ಅದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡಿತ್ತು. ಘಟನೆಯ ಸಿಸಿ ಟಿವಿ ದೃಶ್ಯಾವಳಿಯ ಆಧಾರದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೋಲೀಸರು ಲಾಡಿ ಮೂಲದ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
