ಕೈಕಂಬ:ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಟಾಸ್ಕ್ ಪೋರ್ಸ್ ಸದಸ್ಯರು ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಸಂಪರ್ಕ ಮಾಡಬೇಕು. ಅಲ್ಲಿ ಕೋವಿಡ್ 19 ಸೋಂಕಿತರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಇದ್ದು ರೋಗ ಗಂಭೀರವಾದಾಗ ಕೊನೆಯ ಹಂತದಲ್ಲಿ ವೈದ್ಯರನ್ನು ಕಾಣುವುದರಿಂದ ಸಾವು, ನೋವು ಪ್ರಮಾಣ ಹೆಚ್ಚಾಗುತ್ತದೆ.
ಇದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರದ ಜಾರಿಗೆ ತಂದಿರುವ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜನರಿಗೆ ತಲುಪುವಲ್ಲಿ ನಾವೆಲ್ಲ ಕೆಲಸ ಮಾಡಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದರು.ಅವರು ಗಂಜಿಮಠ ಗ್ರಾಮ ಪಂಚಾಯತ್ ನಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಟಾಸ್ಕ್ ಫೋರ್ಸ್ ಸದಸ್ಯರಿಗೆ ತಮ್ಮ ವ್ಯಾಪ್ತಿಯಲ್ಲಿ ಯಾರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿದಿರುತ್ತದೆ. ಅಂತವರಲ್ಲಿ ಜಾಗೃತಿ ಮೂಡಿಸುವ, ಚಿಕಿತ್ಸೆ ಕೊಡಿಸುವ ಕೆಲಸ ನಡೆಯಬೇಕು. ಈ ಕುರಿತು ವೈದ್ಯಕೀಯ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು. ಈ ಅಭಿಯಾನವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರವಲ್ಲ ಪಾಲಿಕೆ ವ್ಯಾಪ್ತಿಯಲ್ಲಿಯೂ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶೋಹನ್ ಅತಿಕಾರಿ, ಗಂಜಿಮಠ ಪಂಚಾಯತ್ ಅಧ್ಯಕ್ಷರಾದ ನೋಣಯ್ಯ ಕೋಟ್ಯಾನ್,ಕಂದಾವರ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ,ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಿತ್ ರಾಜ್,ನೋಡಲ್ ಅಧಿಕಾರಿ ಕೃಷ್ಣ ಅಡ್ಯಾರ್,ಉಪ ತಹಶೀಲ್ದಾರ್ ಶಿವಪ್ರಸಾದ್,ಗ್ರಾಮ ಲೆಕ್ಕಾಧಿಕಾರಿ,ಪಂಚಾಯತ್ ಅಭವೃದ್ಧಿ ಅಧಿಕಾರಿಗಳು,ಕಂದಾಯ ನಿರೀಕ್ಷಕರು, ಪಂಚಾಯತ್ ಸದಸ್ಯರು ಉಪ್ಥಿತರಿದ್ದರು.
