ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1991) ಪುರಸ್ಕೃತ ಸ್ಯಾಕ್ಯೋಫೋನ್ ವಾದಕ ಎಂ. ಎಸ್. ಗೋಪಾಲ ಕೃಷ್ಣ (93) ಶುಕ್ರವಾರ ಮೂಡುಬಿದಿರೆ ಅಚಾರಿಕೇರಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೊದಲಿಗೆ ತಂದೆ ವಾದ್ಯಕಲಾವಿದ ಸುಬ್ಬು ಸೇರಿಗಾರರ ಬಳಿ ಶಿಕ್ಷಣ ಪಡೆದು ಬಳಿಕ ಮದ್ರಾಸಿನ ಸಂಗೀತ ವಿದ್ವಾಂಸ ಟಿ.ಕೆ. ಆಳ್ವರ್ ರೆಡ್ಡಿಯವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ, ವಿದೇಶೀ ವಾದ್ಯವಾದ ಸ್ಯಾಕ್ಸೋಫೋನ್ ಮೂಲಕ ದೇಶೀಯ ಗಾನಲಹರಿ ಹರಿಸಿದ ಗೋಪಾಲಕೃಷ್ಣ ತವಿಲ್ ಅಲ್ಲದೆ, ಪಿಟೀಲು, ಕೊಳಲು, ಮೋರ್ಸಿಂಗ್ ಸಾಥಿಯೊಂದಿಗೂ ಕಚೇರಿಗಳನ್ನು ನಡೆಸಿಕೊಟ್ಟಿದ್ದರು.
ಮದುವೆ, ದೇವತಾರಾಧನೆ, ಸ್ವಾಗತಗೌರವ ವಾದನದವರೆಗೆ, ಕರ್ನಾಟಕ, ಮುಂಬೈ, ಮದರಾಸ್, ಹೈದರಾಬಾದ್, ದುಬೈ ಹೀಗೆ ಅವರು ಸುಮಾರು 8 ದಶಕಗಳ ಸೇವೆ ಸಲ್ಲಿಸಿದ್ದಾರೆ. ಹೊರನಾಡು ಅನ್ನಪೂಣೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಆರು ದಶಕಗಳಿಗೂ ಮಿಕ್ಕಿದ ವಾದ್ಯ ಸೇವೆ, ಮಂಗಳೂರು ಆಕಾಶವಾಣಿ, ಹೈದರಾಬಾದ್ ದೂರದರ್ಶನ ಕೇಂದ್ರದ ಮೂಲಕ, ದಿ ಮಾಸ್ಟರ್ಸ್ ರೆಕಾರ್ಡಿಂಗ್ ಕಂಪೆನಿ ನಿರ್ಮಿಸಿದ ಹಲವಾರು ಧ್ವನಿ ಸುರುಳಿಗಳ ಮೂಲಕವೂ ಅವರು ನಾಡಿಗೆ ಪರಿಚಿತರು. ಮೂಡುಬಿದಿರೆಯ ದೇವಾಡಿಗರ ಸುಧಾರಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
