ಬಂಟ್ವಾಳ: ಎಲ್ಲಾ ದೇವಸ್ಥಾನಗಳ ರಕ್ಷಣೆಗೆ ಸರ್ಕಾರ, ಜಿಲ್ಲಾಡಳಿತ ಬದ್ಧವಾಗಿದ್ದು, ಐತಿಹಾಸಿಕ ಕಾರಿಂಜೇಶ್ವರ ದೇವಸ್ಥಾನದ ಹಿತದೃಷ್ಟಿಯಿಂದ ಆಸುಪಾಸಿನಲ್ಲಿ ಕಾರ್ಯಾಚರಿಸುವ ಎಲ್ಲಾ ಕೋರೆಗಳಿಗೆ ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಜೊತೆಗೆ ಸೋಮವಾರ ಭೇಟಿ ನೀಡಿದ ಅವರು, ಕಾರಿಂಜದಲ್ಲಿ ಕೆಲವು ದಿನಗಳ ಹಿಂದೆ ಕುಸಿದು ಬಿದ್ದಿರುವ ತಡೆಗೋಡೆಯನ್ನು ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಲ್ಲುಕೋರೆ ಹಾಗೂ ಜಲ್ಲಿಕ್ರಷರ್ ನಿಂದ ದೇವಸ್ಥಾನಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಭಕ್ತಾದಿಗಳ ದೂರಿನ ಹಿನ್ನೆಲೆಯಲ್ಲಿ ಶಾಸಕರ ಜೊತೆ ಪರಿಶೀಲನೆ ನಡೆಸಿ, ಅಧಿಕಾರಿಗಳ ಸಭೆ ನಡೆಸಿದ್ದೇನೆ.ಸುತ್ತಮುತ್ತಲಿನ ಮೂರು ಕಲ್ಲಿನ ಕೋರೆಗಳು ಅಧಿಕೃತವಾಗಿದ್ದು, ಪದ್ಮಶೇಖರ್ ಹಾಗೂ ಲಕ್ಷ್ಮಣ್ ಎಂಬವರ ಕೋರೆಗಳು ಈಗಾಗಲೇ ತಾಂತ್ರಿಕ ಕಾರಣಗಳಿಂದ ಕಾರ್ಯಸ್ಥಗಿತಗೊಳಿಸಿದ್ದು,ಪ್ರಸಕ್ತ ಕಾರ್ಯಾಚರಿಸುತ್ತಿರುವ ಮರ್ವಿನ್ ಎಂಬವರ ಕೋರೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗುವುದು ಎಂದ ಅವರು, ಗಣಿಗಾರಿಕೆಯಿಂದ ದೇವಳಕ್ಕೆ ಹಾಗೂ ಇಲ್ಲಿನ ಬಂಡೆಗಳಿಗೆ ಆಗುವ ತೊಂದರೆಗಳ ಬಗ್ಗೆ ಎನ್ಐಟಿಕೆ ಯ ತಜ್ಞರಿಂದ ಪರಿಶೀಲನೆ ನಡೆಸಿ ಅವರ ವರದಿಯನ್ನಾಧರಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. 
*ಕಾರಿಂಜ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್*
ಕುಸಿದು ಬಿದ್ದಿರುವ ಆವರಣಗೋಡೆಯ ಪುನರ್ ನಿರ್ಮಾಣ ಹಾಗೂ ಅನೇಕ ತುರ್ತು ಕಾಮಗಾರಿಗಳನ್ನು ಶೀಘ್ರ ನಡೆಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭ ದಲ್ಲಿ ಹೇಳಿದರು. ಶಾಸಕ ರಾಜೇಶ್ ನಾಯ್ಕ್ ಅವರ ಕೋರಿಕೆಯಂತೆ ಕಾರಿಂಜೇಶ್ವರ ಕ್ಷೇತ್ರವನ್ನು ಪ್ರವಾಸೋದ್ಯಮಕ್ಕೆ ಸೇರ್ಪಡೆಗೊಳಿಸಲಾಗಿದ್ದು, ತಜ್ಞರ ಸಲಹೆ ಪಡೆದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಅವಧಿ ಮುಗಿದಿರುವ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚನೆಯ ಪ್ರಕ್ರಿಯೇ ನಡೆಯುತ್ತಿದೆ. 210 ದೇವಸ್ಥಾನಗಳ ಪೈಕಿ 84 ದೇವಸ್ಥಾನಗಳ ಸಮಿತಿ ಈಗಾಗಲೇ ರಚನೆಯಾಗಿದ್ದು,40 ದೇವಸ್ಥಾನಗಳ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಕ್ಷೇತ್ರಕ್ಕೆ ಸರಕಾರಿ ಬಸ್ ಗಳ ಸೌಲಭ್ಯ ಆರಂಭಿಸುವುದು ಸಹಿತ ಅಹವಾಲುಗಳನ್ನು ಸಚಿವರಿಗೆ ಸ್ಥಳೀಯರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿ ವೆಂಕಟೇಶ್, ಗಣಿ ಇಲಾಖಾಧಿಕಾರಿ ಮಾಹದೇಶ್ವರ, ತಹಶಿಲ್ದಾರ್ ರಶ್ಮಿ ಎಸ್. ಆರ್,ಕ್ಷೇತ್ರದ ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ,ಕಂದಾಯ ಅಧಿಕಾರಿ ನವೀನ್, ಗ್ರಾಮಕರಣೀಕೆ ಆಶಾ ಮೆಹಂದಲೆ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಆಧ್ಯಕ್ಷ ದೇವದಾಸ ಶೆಟ್ಟಿ, ತಾಪಂ ಸದಸ್ಯ ಪ್ರಭಾಕರಪ್ರಭು, ಗ್ರಾಮಣಿಗಳಾದ ಗಣಪತಿ ಮಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಪ್ರಮುಖರಾದ ಡೊಂಬಯ ಅರಳ,ರವೀಶ್ ಶೆಟ್ಟಿ ,ಶಿವಪ್ಪ ಗೌಡ, ಮೋಹನ್ ಆಚಾರ್ಯ, , ರಾಜರಾಮ್ ನಾಯಕ್, ಪುರುಷೋತ್ತಮ ಶೆಟ್ಟಿವಾಮದಪದವು, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಸುದರ್ಶನ ಬಜ, ಪ್ರದೀಪ್ ಅಜ್ಜಿಬೆಟ್ಟು, ಪ್ರಮೋದ್ ರೈ ಕಾಡಬೆಟ್ಟು, ಧನಂಜಯ ಶೆಟ್ಟಿ ಸರಪಾಡಿ,ರಾಜಗೋಪಾಲ ಪ್ರಭು, ರಾಮಕೃಷ್ಣ ಮಯ್ಯ, ರಾಧಾಕೃಷ್ಣ ಮಯ್ಯ, ಉಮೇಶ್ ಗೌಡ,ಪುರುಷೋತ್ತಮ ಪೂಜಾರಿ ಮಜಲು ಚಿದಾನಂದ ರೈ,ದೇವಳದ ಆರ್ಚಕರಾದ ಮಿಥುನ್ ರಾಜ್ ನಾವುಡ ಜಯಶಂಕರ ಉಪಾಧ್ಯಾಯ, ಮತ್ತಿರರು ಉಪಸ್ಥಿತರಿದ್ದರು.
