ಕೈಕಂಬ : ಮಹಾಮಾರಿ ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದ್ದರೂ ಸರ್ಕಾರ ಮಾತ್ರ ಮತ್ತೊಂದು ಬಾರಿ ಲಾಕ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ. ಆದರೆ ಈ ವಿಷಯವನ್ನು ಗಂಭೀರವಾಗಿ ಅರಿತ ಸ್ಥಳೀಯ ವ್ಯಾಪಾರಸ್ಥರು ಸ್ವಯಂಪ್ರೇರಿತ ಲಾಕ್ಡೌನ್ಗೆ ನಿರ್ಧರಿಸಿದ್ದಾರೆ.ಈಗಾಗಲೇ ಬಜ್ಪೆ, ಉಳ್ಳಾಲ, ಬಂಟ್ವಾಳ, ಮೂಲ್ಕಿ, ಹರೇಕಳ, ಮೂಡಬಿದ್ರೆ, ಕಿನ್ನಿಗೋಳಿ, ಹಳೆಯಂಗಡಿಯಲ್ಲಿ ವರ್ತಕರು ಮತ್ತು ಉದ್ಯಮಿಗಳು ಮುಂದಿನ 15 ದಿನಗಳವರೆಗೆ ಅಪರಾಹ್ನ 2ರಿಂದ ಮರುದಿನ ಬೆಳಿಗ್ಗೆ 5 ಅಥವಾ 7 ಗಂಟೆಯವರೆಗೆ ತಮ್ಮ ಅಂಗಡಿ-ಮುಂಗಟ್ಟು ಮುಚ್ಚಿಟ್ಟು ಕೊರೊನಾ ಸೋಂಕು ನಿಯಂತ್ರಣಕ್ಕೆ ಪಣ ತೊಟ್ಟಿದ್ದಾರೆ. ಇದೀಗ ಎಡಪದವು, ಗುರುಪುರ ಕೈಕಂಬ ಹಾಗೂ ಗಂಜಿಮಠದ ವರ್ತಕರೂ ಸ್ವಯಂಪ್ರೇರಿತ ಲಾಕ್ಡೌನ್ಗೆ ತೀರ್ಮಾನಿಸಿದ್ದಾರೆ.
ಗುರುಪುರ ಕೈಕಂಬದ ಸಭಾಂಗಣದಲ್ಲಿ ಜು. 11ರಂದು ಶನಿವಾರ ಸಂಜೆ ನಾಗರಿಕರು ಮತ್ತು ವ್ಯಾಪಾರಿಗಳು ಆಯೋಜಿಸಿದ ಸಭೆಯಲ್ಲಿ ಸೋಮವಾರ ಸ್ವಯಂಪ್ರೇರಿತ ಬಂದ್ ಅವಶ್ಯಕತೆ ಬಗ್ಗೆ ವ್ಯಾಪಾರಿಗಳಿಗೆ ಮೈಕ್ ಮೂಲಕ ಮಾಹಿತಿ ನೀಡಲಾಗುವುದು ಮತ್ತು ಮಂಗಳವಾರ ಬೆಳಿಗ್ಗೆ 5ರಿಂದ ಅಪರಾಹ್ನ 2ರವರೆಗೆ ಮಾತ್ರ ಅಂಗಡಿ ತೆರೆದಿಟ್ಟು, ಬಳಿಕ ಬಂದ್ ಮಾಡಲಾಗುವುದೆಂದು ತೀರ್ಮಾನಿಸಲಾಯಿತು.
ಇದಕ್ಕೆ ರಿಕ್ಷಾ ಚಾಲಕರು, ಸಣ್ಣ ವ್ಯಾಪಾರಿಗಳು ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿ ಹಿರಿಯ ಹೋಟೆಲ್ ಉದ್ಯಮಿ ಹರಿರಾವ್ ಕೈಕಂಬ, ಸಾಮಾಜಿಕ ಮುಖಂಡರಾದ ಹರೀಶ್ ಮಟ್ಟಿ, ಸೋಹನ್ ಅಥಿಕಾತಿ, ಯು ಪಿ ಇಬ್ರಾಹಿಂ, ನೌಶಾದ್ ಸೂರಲ್ಪಾಡಿ, ಉದ್ಯಮಿ ಜೆರಾಲ್ಡ್ ಲೋಬೊ, ಬಾಷಾ ಮಾಸ್ಟರ್, ಗಂಜಿಮಠ ಪಂಚಾಯತ್ ಉಪಾಧ್ಯಕ್ಷ ಜಾಕಿರ್, ಸುನಿಲ್ ಪೂಜಾರಿ, ಡಾ. ಶ್ರೀದೇವಿ ಕೈಕಂಬ, ಕೃಷ್ಣ ಪೂಜಾರಿ, ತುಕರಾಮ ಗುರುಪುರ, ಮುಸ್ಲಿಂ ಧಾರ್ಮಿಕ ಮುಖಂಡ ಅಬೂಝೈದ್ ಶಾಫಿ ಮದನಿ ಕರಾಯ,ಶಿವರಾಮ್ , ಜಗದೀಶ ದಾವೂದ್, ಆರೋಗ್ಯ ಸಿಬ್ಬಂದಿ ಹಾಗೂ ಅಂಗಡಿ ಮಾಲಕರು, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
ಗಂಜಿಮಠದಲ್ಲಿ ನಡೆದ ಸಭೆಯಲ್ಲಿ ಜು. 13ರಿಂದ ಅಪರಾಹ್ನ 2ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ವ್ಯಾಪಾರ ಬಂದ್ ಅಂಗಡಿ, ರಿಕ್ಷಾ ಮಾಲಕ-ಚಾಲಕರು ನಿರ್ಧರಿಸಿದ್ದಾರೆ. ಎಡಪದವು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಸಂಜೆ ಸಭೆ ಸೇರಿದ ಸ್ಥಳೀಯ ವರ್ತಕರು, ಮುಖಂಡರು, ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ ಸೋಮವಾರದಿಂದ(ಜು. 13) ಜುಲೈ 31ರವರೆಗೆ ಅಪರಾಹ್ನ 2ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ಅಂಗಡಿ ಮುಂಗಟ್ಟು ಹಾಗೂ ರಿಕ್ಷಾ, ಕ್ಯಾಬ್ ಬಂದ್ ಮಾಡಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಸಭೆಯಲ್ಲಿ ಜಿಪಂ ಸದಸ್ಯ ಜನಾರ್ದನ ಗೌಡ, ಪಿಡಿಒ ರಾಜೀವಿ ಡಿ ನಾಯ್ಕ್, ಲೆಕ್ಕ ಸಹಾಯಕ ಇಸ್ಮಾಯಿಲ್, ಆರೋಗ್ಯ ಇಲಾಖೆಯ ಕಿರಣ್, ಪಂಚಾಯತ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಾಜಿ ಸದಸ್ಯರು ಉಪಸ್ಥಿತರಿದ್ದರು.
