ಕೈಕಂಬ: ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಏರಿಕೆಯಾಗಿದ್ದು, ಭಾಗಶಃ ಸ್ವಯಂ ಪ್ರೇರಿತ ಲಾಕ್ ಡೌನ್ ಸೋಮವಾರದಿಂದಲೇ ಅನುಷ್ಠಾನಗೊಂಡಿದೆ.ಅಡ್ಡೂರು ಪರಿಸರದಲ್ಲಿ ಕೊರೋನಾ ಸಾಮುದಾಯಿಕವಾಗಿ ಹರಡುವಿಕೆ ತಡೆಗಟ್ಟುವ ಸಲುವಾಗಿ ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಕಮಿಟಿ ಇತ್ತೀಚಿಗೆ ಜನರ ಹಿತದೃಷ್ಟಿಯಿಂದ ಸಭೆ ಕರೆದು ನಿರ್ಣಯವೊಂದನ್ನು ಕೈಗೊಂಡಿದ್ದು, ಅದರಂತೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಕುಟ್ಟುನಿಟ್ಟಿನ ಸ್ವಯಂ ಪ್ರೇರಿತ ಲಾಕ್ ಡೌನ್ ಅನುಸರಿಸಬೇಕೆಂದು ಮನವಿ ಮಾಡಿತ್ತು. ಇದಕ್ಕೆ ಗ್ರಾಮಸ್ಥರು, ಅಂಗಡಿ ವರ್ತಕರಿಂದ ಭಾರೀ ಬೆಂಬಲ ವ್ಯಕ್ತವಾಗಿವೆ.
ತಾತ್ಕಾಲಿಕ ಚೆಕ್ ಪೋಸ್ಟ್ ನಲ್ಲಿ ಅಡ್ಡೂರು ಎಸ್ಕೆಎಸ್ಸೆಸೆಫ್ ವಿಖಾಯ ತಂಡ: ಅಡ್ಡೂರು (ಮೂರು ಮಾರ್ಗ) ಜಂಕ್ಷನ್ ನಿಂದ ನಡು ಗುಡ್ಡೆ ಭಾಗಕ್ಕೆ ಒಳ ಪ್ರವೇಶಿಸುವ ರಸ್ತೆ ಬದಿಯಲ್ಲಿ ಒಂದು ಚೆಕ್ ಪೋಸ್ಟ್ ಅನ್ನು ರಚಿಸಲಾಗಿದೆ. ಇಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೂ ಎಸ್ಕೆಎಸ್ಸೆಸೆಫ್ ವಿಖಾಯ ತಂಡದ ಸದಸ್ಯರು ಚೆಕ್ ಪೋಸ್ಟ್ ದಾಟುವ ಜನರ ಉಷ್ಣತಾ ತಪಾಣೆ ನಡೆಸುತ್ತಾರೆ. ಜೊತೆಗೆ ಹೊರ ಊರಿನಿಂದ ಬರುವವರ ಹೆಸರನ್ನು ನೋಂದಾಯಿಸಿ ಮಾಹಿತಿ ಪಡೆದುಕೊಳ್ಳುತ್ತಾರೆ.
ಸದ್ಯ ಈ ಸ್ವಯಂ ಪ್ರೇರಿತ ಲಾಕ್ ಡೌನ್ ಇನ್ನೂ 2 ವಾರಗಳ ಕಾಲ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಇಲ್ಲಿನ ಗ್ರಾಮಸ್ಥರು ತಮ್ಮ ಆರೋಗ್ಯ ಕಾಳಜಿಯಿಂದ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಏರಲಾದ ಲಾಕ್ ಡೌನ್ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಎಲ್ಲರ ಪ್ರಸಂಶೆಗೆ ಕಾರಣವಾಗಿದೆ.
