ಗುರುಪುರ : ಗುರುಪುರ ವಲಯ ಕಾಂಗ್ರೆಸ್ ಸಮಿತಿಯು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಗುರುವಾರ(ಜು. 2) ಆಯೋಜಿಸಲಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಮತ್ತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆಯನ್ನು ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ, ಹಿರಿಯ ಕಾಂಗ್ರೆಸ್ಸಿಗರಾದ ಯಶವಂತ ಆಳ್ವ ಗುರುಪುರ, ಯಾಕೂಬ್ ಗುರುಪುರ, ಹೆರಾಲ್ಡ್ ಮಿನೆಜಸ್ ದೀಪ ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಯಶವಂತ ಆಳ್ವ ಮಾತನಾಡಿ, ಕರ್ನಾಟಕ ಕಾಂಗ್ರೆಸ್ಸಿಗೆ ಬಲ ತುಂಬಬಲ್ಲ ಪ್ರಾಮಾಣಿಕ, ದಕ್ಷ ಯುವ ನೇತಾರ ಡೀಕೇಶಿ. ಇವರಿಂದ ಪಕ್ಷ ಬಲ ಹೆಚ್ಚಲಿದೆ ಎಂಬ ವಿಶ್ವಾಸ ಸಮಸ್ತ ಕಾರ್ಯಕರ್ತರಲ್ಲಿದೆ. ಭೂಸುಧಾರಣೆ ಮೂಲಕ ದೇಶ, ಇದರಲ್ಲೂ ದ.ಕ ಜಿಲ್ಲೆಯ ಪ್ರತಿಯೊಬ್ಬರಿಗೂ ಶಕ್ತಿ ನೀಡಿದ ಹಾಗೂ ದೇಶದ ಕಟ್ಟಕಡೆಯ ವ್ಯಕ್ತಿಗೂ ಪ್ರಧಾನಿಯಾಗುವ ಅವಕಾಶ ಕಲ್ಪಿಸಿದ ಪಕ್ಷ ಕಾಂಗ್ರೆಸ್. ಆದರೆ ನಾವು ಈಗ ಅನುಭವಿಸುತ್ತಿರುವ ಬಿಜೆಪಿ ಜನಸಾಮಾನ್ಯರನ್ನು ಮೋಡಿ ಮಾಡುವ ಪಕ್ಷವಾಗಿದ್ದು, ಇವರ ದುರಾಡಳಿತದಿಂದ ದೇಶ ಎಲ್ಲ ರಂಗದಲ್ಲೂ ಮಂಕಾಗಿದೆ ಎಂದರು.
ವಿಜಯಾ ಜಿ ಸುವರ್ಣ ಮಾತನಾಡಿ, ಡಿ.ಕೆ.ಶಿ ಅಧ್ಯಕ್ಷರಾಗುತ್ತಾರೆ ಎಂದಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನವೊಂದು ಮೂಡಿದೆ. ಈ ಕಾರಣದಿಂದಲೇ ಗ್ರಾಮೀಣ ಪ್ರದೇಶಗಳಲ್ಲೂ ಇಂದಿನ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರ ಸಾಧ್ಯವಾಯಿತು. ಕಾಂಗ್ರೆಸ್ಸಿನಿಂದ ಎಲ್ಲ ರಂಗದಲ್ಲೂ ದೇಶದ ಅಭಿವೃದ್ಧಿಯಾಗಿತ್ತು. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಪಕ್ಷ ಕಾಂಗ್ರೆಸ್. ನಾವೆಲ್ಲರೂ ಈಗ ಡಿ.ಕೆ.ಶಿ ಬೆಂಬಲಕ್ಕೆ ನಿಲ್ಲುವ ಪ್ರತಿಜ್ಞೆ ಸ್ವೀಕರಿಸಬೇಕು ಎಂದರು.
ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಜನಸಾಮಾನ್ಯರು ನೇರ ಪ್ರಸಾರ ವೀಕ್ಷಿಸಿದರು. ಮೊದಲಿಗೆ ಚೀನಾ ಗಡಿಯಲ್ಲಿ ಹುತಾತ್ಮರಾದ 20 ಸೈನಿಕರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕಾರ್ಯಕರ್ತರೆಲ್ಲರು ಕಾಂಗ್ರೆಸ್ ಪಕ್ಷದ ಏಕತೆಗಗಿ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಿದರು. ಸಭೆಯಲ್ಲಿ ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ತಾಪಂ ಸದಸ್ಯ ಸಚಿನ್ ಅಡಪ, ಪಂಚಾಯತ್ನ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪಕ್ಷದ ವಲಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಪುರುಷೋತ್ತಮ ಮಲ್ಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಭಂಡಾರಿ ವಂದಿಸಿದರು.

