ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಈದುಲ್ ಫಿತರ್ ಸಂಭ್ರಮದಲ್ಲಿ ದ್ದ ಗೂಡಿಬಳಿಯ ಈಜುಪಟುಗಳು ನದಿಯಿಂದ ಮೇಲಕ್ಕೆತ್ತಿ ರಕ್ಷಿಸಲು ಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟ ಘಟನೆ ರವಿವಾರ ನಡೆದಿದೆ. ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ (29) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಭಾನುವಾರ ಮಧ್ಯಾಹ್ನ ಹೊತ್ತಿಗೆ ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಮೇಲಿನಿಂದ ನದಿನೀರಿಗೆ ದುಮುಕಿದ್ದಾನೆ.ಈ ವೇಳೆ ಗೂಡಿನಬಳಿಯಲ್ಲಿದ್ದ ಈಜುಪಟುಗಳಾದ ಶಮೀರ್ ,ಮುಹಮ್ಮದ್ ಮೊಮ್ಮು ,ತೌಸೀಫ್ ,ಝಾಹಿದ್ ಜಾಯಿ, ಅಕ್ಕರಂಗಡಿಯ ಮುಕ್ತಾರ್, ಆರಿಫ್ ಹೈವೇ ಮೊದಲಾದವರು ಈದುಲ್ ಫಿತರ್ ಸಂಭ್ರಮವನ್ನು ಲೆಕ್ಕಿಸದೇ ತಕ್ಷಣ ನದಿಗೆ ಹಾರಿ ನಿಶಾಂತ್ ನನ್ನು ನೀರಿನಿಂದ ಮೇಲಕೆತ್ತಿ ಅತನ ಜೀವ ರಕ್ಷಣೆಗೆ ಮುಂದಾದರಲ್ಲದೆ ಆಸ್ಪತ್ರೆಗೂ ಸಾಗಿಸಿದರು.
ಆದರೆ ನಿಶಾಂತ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡರು.ಈತನ ಆತ್ಮಹತ್ಯಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಈಜುಪಟುಗಳು ಯುವಕನ ರಕ್ಷಣೆಗೆ ಮುಂದಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಜು ಪಟುಗಳ ಸಾಧನೆಗೆ ವ್ಯಾಪಕ ಶ್ಲಾಘನೆಯು ವ್ಯಕ್ತವಾಗಿದೆ.
