ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಸೇವೆ ನೀಡುವ ಮೂಲಕ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.ರಾಜ್ಯ ಎನ್.ಎಚ್.ಎಂ.ವಿಭಾಗದಿಂದ ಬುಧವಾರ ಎನ್.ಎಂ.ಎಚ್.ಸಿಬ್ಬಂದಿ ಗಳು ಸೇವೆಗೆ ವಿರಾಮ ಪಡೆಯಲು ಸೂಚಿಸಿದ್ದರೂ ಕೂಡ ಜಿಲ್ಲೆಯಲ್ಲಿ ಸಿಬ್ಬಂದಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಸೇವೆಗೆ ಹಾಜರಾಗಿ ವೇತನ ಪಡೆಯದೆ ಉಚಿತ ಆರೋಗ್ಯ ಸೇವೆ ನೀಡಿದ್ದಾರೆ.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಎಲ್ಲಾ ಸಿಬ್ಬಂದಿಗಳು ಬುಧವಾರ ಒಂದು ದಿನ ಕಪ್ಪು ಪಟ್ಟಿ ಧರಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ರಾಜ್ಯ ಸಂಘದ ಸೂಚನೆಯಂತೆ ವಿನೂತನ ಶೈಲಿಯಲ್ಲಿ ಒಂದು ದಿನ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿ 2005 ರಲ್ಲಿ ಅನುಷ್ಠಾನಗೊಂಡ ರಾಷ್ಟೀಯ ಅರೋಗ್ಯ ಅಭಿಯಾನದಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸರಕಾರಿ ಲೇಡಿಗೋಷನ್ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಅರೋಗ್ಯ ಕೇಂದ್ರ, ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ಇತರ ಅರೋಗ್ಯ ಕೇಂದ್ರಗಳಲ್ಲಿ 500ಕ್ಕು ಹೆಚ್ಚು ಮಂದಿ ವಿವಿಧ ವೃಂದದ ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ, ಹರ್ಯಾಣ ರಾಜ್ಯ ಮಾದರಿಯಲ್ಲಿ ಕಂಪ್ರೆಹೆನ್ಸಿವ್ ಹೆಚ್ ಆರ್ ಪಾಲಿಸಿ ರಚನೆ, ಹೊರಗುತ್ತಿಗೆ ಪದ್ದತಿ ರದ್ದುಗೊಳಿಸುವುದು, ಇ.ಎಸ್.ಐ l. ಸೌಲಭ್ಯ ವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಹಂತ ಹಂತವಾಗಿ ಗುತ್ತಿಗೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ಇಲಾಖೆಯ ಖಾಯಂ ಹುದ್ದೆಗಳಿಗೆ ಸೇರಿಸಿ ಬೇಕು ಎಂದು ಗುತ್ತಿಗೆ ನೌಕರರ ಪ್ರಮುಖ ಬೇಡಿಕೆಯಾಗಿದೆ.
