ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅನ್ಯಾಯವಾಗಿ ಅಮಾನತುಗೊಳಿಸಿ ಒಂದು ವರ್ಷ ಕಳೆದರೂ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳದೆ ಅಮಾನವೀಯತೆ ಪ್ರದರ್ಶಿಸುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ, ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ನೂರಾರು ಮಂದಿ ಇಂದು ಉಡುಪಿ ಜಿಲ್ಲಾಸ್ಪತ್ರೆಯಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಡಾ.ಭಂಡಾರಿ, ಮುಂದಿನ 15 ದಿನಗಳೊಳಗೆ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ, ಜಿಲ್ಲಾಸ್ಪತ್ರೆ ಮುಂದೆ ಸತ್ಯಾಗ್ರಹ ಕ್ಲಿನಿಕ್ ಆರಂಭಿಸಿ, ಬಡವರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವ ಮೂಲಕ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.
ಸತ್ಯಾಗ್ರಹ ಕ್ಲಿನಿಕ್ ಆರಂಭಿಸಿದ ಬಳಿಕವೂ ಮುಂದಿನ 15 ದಿನಗಳೊಳಗೆ ಅಮಾನತು ಆದೇಶವನ್ನು ಹಿಂತೆಗೆದುಕೊ:ಳ್ಳದೇ ಇದ್ದಲ್ಲಿ ಇಡೀ ಹಗರಣದ ಹಿನ್ನೆಲೆ, ಇದರ ಹಿಂದಿರುವ ಕೈಗಳ ಸಹಿತ ಸಮಗ್ರ ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆಗೊಳಿಸುವುದಾಗಿಯೂ, ನಂತರ ಕಾನೂನು ಹೋರಾಟ ನಡೆಸುವುದಾಗಿ ಡಾ.ಭಂಡಾರಿ ಪ್ರಕಟಿಸಿದರು.
ಪ್ರತಿಭಟನಾ ಸಭೆಯ ಬಳಿಕ ಪ್ರತಿಭಟನಾಕಾರರು ಬಾಯಿಗೆ ಬಿಳಿ ಬಟ್ಟೆ ಮತ್ತು ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಘೋಷಣೆಗಳಿರುವ ಪ್ಲೆ ಕಾರ್ಡ್ ಹಿಡಿದುಕೊಂಡು ಎಂಡ್ ಪಾಯಿಂಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿದರು.
ಐಎಂಎ ಅಧ್ಯಕ್ಷರಾದ ಡಾ.ಅಶೋಕ್ ಕುಮಾರ್ ಓಕುಡೆ, ಡಾ.ಅರವಿಂದ ನಾಯಕ್ ಅಮ್ಮುಂಜೆ, ಡಾ.ವಿರೂಪಾಕ್ಷ ದೇವರಮನಿ, ಡಾ.ಛಾಯಾಲತಾ, ಡಾ.ಗೌರಿ, ಡಾ.ಗಿರಿಜಾ, ಡಾ.ಶುಭ ಗೀತಾ, ಡಾ.ವಾಸುದೇವ, ಡಾ.ಸುನೀತಾ ಶೆಟ್ಟಿ, ಕೆ.ಎಂ.ಉಡುಪ, ಸಿ.ಎಸ್.ನಂಬಿಯಾರ್, ವೆರೋನಿಕಾ ಕರ್ನೇಲಿಯೋ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಸನ್ನ ಶೆಟ್ಟಿ ಹೆಬ್ರಿ, ಪದ್ಮಾಸಿನಿ, ಉದಯ ಕುಮಾರ್ ಶೆಟ್ಟಿ ಇನ್ನಾ, ಚಂದ್ರಿಕಾ ಶೆಟ್ಟಿ, ನಾಗಭೂಷಣ ಶೇಟ್, ಸ್ವಪ್ನಾ ಶರತ್, ರಮೇಶ್ ಕಾಂಚನ್, ವಿಶು ಶೆಟ್ಟಿ ಅಂಬಲಪಾಡಿ, ದಿವಾಕರ ಕುಂದರ್, ವಾಸುದೇವ ಕಾಮತ್ ಕುಂದಾಪುರ, ರವಿರಾಜ್ ಎಚ್.ಪಿ., ಮಹೇಶ್ ಉಡುಪ, ರೋಹಿತ್ ಶೆಟ್ಟಿ ಬೈಲೂರು, ಚಂದ್ರಶೇಖರ ಶೆಟ್ಟಿ, ಸೌಜನ್ಯಾ ಶೆಟ್ಟಿ, ಕಿರಣ್, ರೊನಾಲ್ಡ್ ಕ್ಯಾಸ್ತಲಿನೋ, ಶ್ರೀರಾಮ ದಿವಾಣ ಸಹಿತ ಅನೇಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

