ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಕಷ್ಟು ಕಾರ್ಯಗಳು ನಡೆಯುತ್ತಿದ್ದು, ದೇವರ ಗರ್ಭಗುಡಿಯ ಒಳಗೆ ಚಿನ್ನದ ಮಂಟಪ, ಧ್ವಜಸ್ತಂಬದ ಬಳಿ ಬೆಳ್ಳಿಯ ಮಂಟಪ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ಗರ್ಭಗುಡಿಯ ಎದುರಿನ ಬೆಳ್ಳಿಯ ಮಂಟಪವನ್ನು ಸುಮಾರು ರೂ. 45ಲಕ್ಷವನ್ನು ಖರ್ಚನ್ನು ಭಕ್ತರಾದ ವಾಮಯ್ಯ ಶೆಟ್ಟಿಯವರು ಭರಿಸಲಿದ್ದಾರೆ.
ದೇವರಿಗೆ ಬಂಗಾರದ ಮಂಟಪವನ್ನು ಒಂದು ಕೆಜಿ ಬಂಗಾರವನ್ನು ಅಳವಡಿಸಿ ನಿರ್ಮಿಸಲಾಗುತ್ತಿದೆ.ಕಳೆದ ಬಾರಿ ಮಾಗಂದಡಿ ಕುಟುಂಬಸ್ಥರು ದೇವಳಕ್ಕೆ ನೂತನ ಧ್ವಜಸ್ತಂಬವನ್ನು ಸೇವಾ ರೂಪದಲ್ಲಿ ನೀಡಿದ್ದು, ಇದಕ್ಕೆ ಭಕ್ತರು ನೀಡಿದ ದೇಗುಲದಲ್ಲಿರುವ ಸುಮಾರು ಎಂಟು ಕೆಜಿ ಬಂಗಾರವನ್ನು ಬಳಸಿ ಲ್ಯಾಮಿನೇಟ್ ಮಾಡಿ ಅಳವಡಿಸಲಾಗುತ್ತದೆ. ಅಳವಡಿಸುವ ವೆಚ್ಚ ರೂ. ಮೂವತ್ತು ಲಕ್ಷವನ್ನು ಭಕ್ತರು ಭರಿಸಲಿದ್ದಾರೆ.
ದೇವಳದ ಒಳಗೆ ತಂಪು ವಾತಾವರಣ ಇರುವಂತೆ ಮಾಡುವುದಕ್ಕಾಗಿ ಹಳೆಯ ಮೇಲ್ಭಾಗದ ಛಾವಣಿಯನ್ನು ತೆಗೆದು ಪಬ್ ಶೀಟನ್ನು ಅಳವಡಿಸಲಾಗುತ್ತಿದೆ. ಇದಕ್ಕೂ ದಾನಿಯೊಬ್ಬರು ಸಹಕರಿಸಿದ್ದಾರೆ. ದೇಗುಲದ ಹೊರಭಾಗ ಮತ್ತು ಒಳಭಾಗದ ಉಪ್ಪರಿಗೆಯಲ್ಲಿ ಸುತ್ತಲೂ ಮರದ ಕಲಾಕೃತಿಗಳ ಅಳವಡಿಕೆ ಆಗುತ್ತಿದ್ದು, ಇದಕ್ಕೆ ತಗಲುವ ಸುಮಾರು ರೂ. ಐವತ್ತು ಲಕ್ಷವನ್ನು ಭಕ್ತರೇ ಭರಿಸಲಿದ್ದಾರೆ. ದೇಗುಲದ ಮೇಲಂತಸ್ತಿನಲ್ಲಿ ಕಾಷ್ಟಕೆತ್ತನೆ ಮನಮೋಹಕವಾಗಿ ಮೂಡಿಬರಲಿದ್ದು, ದೇಗುಲದ ಅಂದವನ್ನು ಹೆಚ್ಚಿಸಲಿದೆ.
