ವಾಮಂಜೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ(ಮಂಗಳೂರು), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ(ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ-ಬೆಂಗಳೂರು) ಜಂಟಿ ಆಶ್ರಯದಲ್ಲಿ ಜ. 3ರಂದು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಎರಡು ದಿನಗಳ ಮೈಸೂರು ವಿಭಾಗ ಮಟ್ಟದ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳ ಮೂಲ ವಿಜ್ಞಾನ ಮನೋಭಾವ ಉತ್ತೇಜನೆಯ ಸ್ಪರ್ಧಾ ಕಾರ್ಯಕ್ರಮವನ್ನು ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ ನಿರ್ದೇಶಕಿ ಮೇಘನಾ ಆರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ ವಿ ರಾವ್ ಮಾತನಾಡಿ, ಇಲ್ಲಿ ಈ ಸ್ಪಧೇ ಇದೇ ಪ್ರಥಮ. ಸ್ಪರ್ಧೆಗೆ ನಮ್ಮ ನಿರೀಕ್ಷೆಗೂ ಮೀರಿ, 200ಕ್ಕೂ ಅಧಿಕ ಸಂಖ್ಯೆ ವಿಜ್ಞಾನ ವಿದ್ಯಾರ್ಥಿಗಳು(18 ಮಂದಿ ಶಿಕ್ಷಕರ ಸಹಿತ) ಪಾಲ್ಗೊಂಡಿರುವುದು ವೈಜ್ಞಾನಿಕ ಬೆಳವಣಿಗೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಮುಂದಿರುವ ಭಾವೀ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ನಿಮ್ಮ ಸಾಧನೆ ಮಹತ್ವದ್ದಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಿಲಿಕುಳದ `ಬ್ರಾಂಡ್ ಅಂಬಾಸೀಡರ್'(ರಾಯಭಾರಿ) ಆಗಿದ್ದು, ಇಲ್ಲಿನ ವಿಶೇಷತೆ ಹೊತ್ತುಕೊಂಡು ಹೋಗಬೇಕು. ವಿಜ್ಞಾನ ಹೊಸದಲ್ಲ. ಯಾಕೆಂದರೆ ಪಿಲಿಕುಳ ಸ್ವಯಂ ಮಾತನಾಡುತ್ತ, ನಿಮ್ಮ ಭಾವನೆಗಳಿಗೆ ಸ್ಫೂರ್ತಿದಾಯಕವಾಗಲಿದೆ. ಇಲ್ಲಿನ ಸ್ಪರ್ಧೆಯಲ್ಲಿ ನೀವು `ಗೊತ್ತಿಲ್ಲ’ ಎಂಬ ಭಾವನೆ ಹೋಗಲಾಡಿಸಿ, `ಗೊತ್ತುಂಟು’ ಎಂಬ ಅನ್ವೇಷಣಾ ಮನೋಸ್ಥಿತಿಯೊಂದಿಗೆ ಮರಳಬೇಕು ಎಂದರು.
ವಿಜ್ಞಾನ ಕೇಂದ್ರದ ಅಧಿಕಾರಿ ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ. ರಾವ್, ಮೇಘನಾ, ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಡಾ. ರಾಜೇಶ್ ಕುಮಾರ್ ಶೆಟ್ಟಿ, ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ರಮಾನಂದ ಉಪಸ್ಥಿತರಿದ್ದರು. ಕೇಂದ್ರದ ಕ್ಯುರೇಟರ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರೆ, ಸಿಬ್ಬಂದಿ ಶರಣಯ್ಯ ವಂದಿಸಿದರು.
ಮೈಸೂರು ವಿಭಾಗ ಮಟ್ಟದಿಂದ ಮಂಗಳುರು, ಕಡಬ, ಪುತ್ತೂರು, ಕುಂದಾಪುರ, ಬೈಂದೂರು, ಉಡುಪಿ, ಹಾಸನ, ಮೈಸೂರು, ಶೃಂಗೇರಿ, ಬೆಟ್ಟಂಪಾಡಿ, ಮೂಲ್ಕಿಯಿಂದ 19 ಪದವಿ ಕಾಲೇಜುಗಳು ಮತ್ತು ಪುತ್ತೂರು, ಉಡುಪಿಯ ಮೂರು ಸ್ನಾತಕೋತ್ತರ ಪದವಿ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾವಹಿಸಿದ್ದಾರೆ. ನಾಟಕ, ರಸಪ್ರಶ್ನೆ, ಗಣಿತ ಮಾಡೆಲಿಂಗ್, ಡ್ರಾಯಿಂಗ್ ಮತ್ತು ಪ್ರಬಂಧ ವಿಷಯಗಳು ಸ್ಪರ್ಧೆಯಲ್ಲಿ ಒಳಗೊಂಡಿವೆ. ವಿವಿಧ ವಿಭಾಗಗಳಲ್ಲಿ 17 ಮಂದಿ ತೀರ್ಪುಗಾರರಾಗಿ ಸಹಕರಿಸಲಿದ್ದಾರೆ. ಇಲ್ಲಿ ಪ್ರಶಸ್ತಿ ಗಳಿಸುವ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.



