ಬಂಟ್ವಾಳ : ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲ ಇದರ ಎರಡನೇ ಹಂತದ ಸಾಮೂಹಿಕ ಸ್ವಚ್ಛತಾ ಆಂದೋಲನ ಭಾನುವಾರ ಉಳಿಯ ಹೊಯ್ಗೆ ನದಿ ಪರಿಸರದಲ್ಲಿ ನಡೆಯಿತು, ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟವು ನೇತ್ರಾವತಿ ನದಿ ಪಾತ್ರದಲ್ಲಿರುವ ಪ್ರಮುಖ ಜನವಾಸ ಕೇಂದ್ರಗಳಾದ ಉಳಿಯ, ಮಾರ್ಗತಲೆ, ಕಟ್ಟತ್ತಲೆ, ಕಕ್ಕೆತೋಟ, ಪಾಂಡೆಲ್ ಪಕ್ಕ, ಕೊಟ್ಟಾರ, ಕೋಡಿ, ಹಾಗೂ ಕೋಟೆಪುರ ಇಲ್ಲಿನ ನಾಗರಿಕರು ಎದುರಿಸುತ್ತಿರುವ ನದಿ ಮಾಲಿನ್ಯದ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಧಾರ್ಮಿಕ ಮುಖಂಡರುಗಳು, ಸಂಘ-ಸಂಸ್ಥೆಗಳ ಮುಂದಾಳುತ್ವದ ಒಕ್ಕೂಟ ವ್ಯವಸ್ಥೆಯಡಿ ನಿರಂತರ ನದಿ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಉಳಿಯ ಹೊಯ್ಗೆ ಪ್ರದೇಶದಲ್ಲಿರುವ ಕ್ರೈಸ್ತ ಆರಾಧನಾಲಯ ಸಂತ ಪೀಟರ್ ಚಾಪೆಲ್ ಪರಿಸರವನ್ನು ಸರ್ವ ಧರ್ಮೀಯರು ಸೇರಿ ಗುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಬಳಿಕ ನೇತ್ರಾವತಿ ನದಿ ತೀರದಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ, ತರ್ಮಕೋಲ್ ಸೇರಿದಂತೆ ವಿವಿಧ ರೀತಿಯ ಪರಿಸರ ಮಾರಕ ತ್ಯಾಜ್ಯ ವಸ್ತುಗಳನ್ನು ಸಾಮೂಹಿಕವಾಗಿ ಹೆಕ್ಕಿ ತೆಗೆದು ಕಸವಿಲೇವಾರಿ ಮಾಡಿದರು, ಈ ಮೂಲಕ ಪರಿಸರ ಸ್ವಚ್ಛತೆ ಹಾಗು ಮಾನಸಿಕ ಸ್ವಸ್ಥತೆಯೊಂದಿಗೆ ಸೌಹಾರ್ದತಾ ಸಮಾಜದ ಸಾಕ್ಷಿ ಬಿಂದುಗಳಾದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಮೋಲಿ ಮೊಂತೆಯಿರೋ ರವರು ಪ್ರಾರ್ಥನೆ ನೆರವೇರಿಸಿದರು, ಕಾರ್ಯಕ್ರಮದ ಸಮಾರೋಪದಲ್ಲಿ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಅಂತ ಗುರಿಕಾರರಾದ ಶ್ರೀ ರಾಜೇಶ್ ನಾಯಕ್ ಹಾಗು ಸ್ಥಳೀಯ ನಗರಸಭಾ ಕೌನ್ಸಿಲರ್ ಶ್ರೀಮತಿ ವೀಣಾ ಡಿಸೋಜ ಸಂಧರ್ಭಯೋಚಿತವಾಗಿ ಮಾತನಾಡಿದರು. ಶ್ರೀ ಮಂಗಳೂರು ರಿಯಾಜ್ ಸ್ವಾಗತಿಸಿ, ಮಾಜಿ ಕೌನ್ಸಿಲರ್ ಮತ್ತು ಸ್ವಚ್ಛತಾ ಆಂದೋಲನದ ಸಂಚಾಲಕರಾದ ಶ್ರೀ ಸುಂದರ್ ಉಳಿಯ ಧನ್ಯವಾದವಿತ್ತರು.

ಕೊನೆಯಲ್ಲಿ ಅವರ್ ಲೇಡಿ ಆಫ್ ಹೆಲ್ತ್ ಕ್ರೈಸ್ತ ಆರಾಧನಾಲಯದಲ್ಲಿ ಸ್ವಯಂ ಸೇವಕರು ಲಘು ಉಪಹಾರವನ್ನು ಸ್ವೀಕರಿಸಿದರು.
ಮುಂದಿನ ತಿಂಗಳು ಜನವರಿ 26 ರಂದು ಮಾರ್ಗತಲೆ ಮಸ್ಜಿದುಲ್ ಮೀರಾಜ್ ಜುಮಾ ಮಸೀದಿಯನ್ನು ಕೇಂದ್ರವಾಗಿಟ್ಟು ಮೂರನೇ ಹಂತದ ನದಿ ಪರಿಸರದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಸಮಿತಿಯು ಘೋಷಿಸಿತು.



